ಚಿಕ್ಕಮಗಳೂರು: `ನಂದಿತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ರಾಜ್ಯ ಸರಕಾರ ರಕ್ಷಣೆ ಮಾಡುತ್ತಿದೆ. ಕಿಮ್ಮನೆ ರತ್ನಾಕರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಣ್ಮಕ್ಕಳ ಅತ್ಯಾಚಾರವನ್ನು ಕೇವಲವಾಗಿ ಕಾಣುತ್ತಿದ್ದಾರೆ.
ತೀರ್ಥಹಳ್ಳಿಯಲ್ಲಿ ನಡೆದಿರುವ ಘನಘೋರ ಕೃತ್ಯದ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿ ಶಿಕ್ಷಿಸದಿದ್ದಲ್ಲಿ ಆರೋಪಿಗಳನ್ನು ಸಾರ್ವಜನಿಕರೇ ಹಿಡಿದು ಕೈ-ಕಾಲು ಕತ್ತರಿಸಬೇಕಾಗುತ್ತದೆ’ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಮುತಾಲಿಕ್ ಅವರು, `ನಂದಿತಾ ಪ್ರಕರಣದಿಂದ ಮಲೆನಾಡಿನಲ್ಲಿ ಅಶಾಂತಿ ನೆಲೆಸಿದೆ. ನಂದಿತಾ ಪೂಜಾರಿ ಮನೆಯ ಹಿಂಬದಿಯ ಮುಸ್ಲಿಂ ಯುವಕರು ಕೃತ್ಯದಲ್ಲಿ ಪಾಲ್ಗೊಂಡಿರುವ ಬಗ್ಗೆ ಆಕೆಯ ತಂದೆ ದೂರಿನಲ್ಲಿ ಹೇಳಿದ್ದರೂ ಪೊಲೀಸರು ಪ್ರಕರಣ ತಿರುಚಲು ಯತ್ನಿಸುತ್ತಿದ್ದಾರೆ.
ಇಂದು ತೀರ್ಥಹಳ್ಳಿ ಮಾತ್ರ ಹೊತ್ತಿ ಉರಿಯುತ್ತಿದೆ. ಒಂದು ವೇಳೆ ಪೊಲೀಸ್ ಇಲಾಖೆ ಆರೋಪಿಗಳನ್ನು ರಕ್ಷಿಸಲು ಯತ್ನಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ಭುಗಿಲೇಳಲಿದ್ದು, ರಾಜ್ಯ ಹೊತ್ತಿ ಉರಿಯಲಿದೆ’ ಎಂದು ಹೇಳಿದ್ದಾರೆ.
ನವೆಂಬರ್ 10ರವರೆಗೆ ನಿಷೇಧಾಜ್ಞೆ ಜಾರಿ:
ತೀರ್ಥಹಳ್ಳಿಯಲ್ಲಿ ಪ್ರತಿಭಟನೆ, ವಾಹನಗಳಿಗೆ ಕಲ್ಲು ಬೀಳುತ್ತಿದ್ದಂತೆ ಪೊಲೀಸ್ ಇಲಾಖೆ ಸೆಕ್ಷನ್ 144 ಜಾರಿಗೊಳಿಸಿದ್ದು, ನವೆಂಬರ್ 10ರವರೆಗೆ ನಿಷೇಧಾಜ್ಞೆಯನ್ನು ಹೇರಿದೆ. ಪೇಟೆ ಸಂಪೂರ್ಣ ಬಂದ್ ಅಗಿದ್ದು, ಪ್ರತಿಭಟನೆಗೆ ಮುಂದಾದ ಸಾರ್ವಜನಿಕರನ್ನು ಪೊಲೀಸರು ಲಾಠಿಛಾರ್ಜ್ ನಡೆಸಿ ತಡೆದಿದ್ದಾರೆ. ಅಲ್ಲಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಲಾಗಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

