ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲವನ್ನು ರಾಜ್ಯ ಸರಕಾರದ ನೂತನ ” ದೈವ ಸಂಕಲ್ಪ” ಯೋಜನೆಯಡಿ ಸೇರಿಸಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವಂತೆ ಮುಜರಾಯಿ, ಹಜ್ ಮತ್ತು ವಕ್ಸ್ ಸಚಿವೆ ಜೊಲ್ಲೆ ಶಶಿಕಲಾ ಅವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೆಂಗಳೂರಿನಲ್ಲಿ ಮನವಿ ನೀಡಿದರು.
ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದಲ್ಲಿ ಫಲ್ಗುಣಿ ನದಿ ತೀರದಲ್ಲಿರುವ ಮಾರ್ಕಾಂಡೇಯ ಪುರಾಣದಲ್ಲಿ ಉಲ್ಲೇಖವಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವು ಕರ್ನಾಟಕ ಸರಕಾರದ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ “ಎ” ಗ್ರೇಡ್ ದೇವಸ್ಥಾನವಾಗಿರುತ್ತದೆ. ಪ್ರಸ್ತುತ ದೇಗುಲದಲ್ಲಿ ಆರಾಧಿಸಲ್ಪಡುತ್ತಿರುವ ದೇವಿಯ ಮೃಣ್ಮಯ ಮೂರ್ತಿಯು ಸುಮಾರು ವರ್ಷಗಳ ಹಿಂದೆ ಸುರತ ಮಹಾರಾಜನಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದು, ದೇವಾಲಯವು ಸಾವಿರಾರು ವರ್ಷಗಳ ಹಿಂದಿನಿಂದ ಅಸ್ತಿತ್ವದಲ್ಲಿ ಇರುವ ಬಗ್ಗೆ ಶಾಸನಗಳು ಇವೆ.
ಕಳೆದ ಎರಡು ವರ್ಷಗಳ ಮೊದಲು ನವೀಕರಣಗೊಂಡ ಈ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ಭಕ್ತರ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ದೇವಿಯ ವಾರ್ಷಿಕ ಜಾತ್ರೆಯು ಪೂರ್ತಿ ಒಂದು ತಿಂಗಳು ಮಾರ್ಚ್ ಮತ್ತು ಎಪ್ರಿಲ್ ತಿಂಗಳ ಮಧ್ಯದಲ್ಲಿ ನಡೆಯುತ್ತಿದ್ದು ಅಪಾರ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಹೀಗಿರುವಾಗ ಕ್ಷೇತ್ರದ ಮೂಲಸೌಕರ್ಯ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಯು ಅವಶ್ಯವಾಗಿ ಆಗಬೇಕಿದೆ.
ಆದುದರಿಂದ ಕ್ಷೇತ್ರದ ಮೂಲಸೌಕರ್ಯ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗಾಗಿ ದೈವ ಸಂಕಲ್ಪ ಯೋಜನೆಯಡಿ ಬಂಟ್ವಾಳ ತಾಲೂಕು ಕಲಿಯಂಗಳ ಗ್ರಾಮದಲ್ಲಿರುವ ಪೊಳಲ ಶ್ರೀ ರಾಜರಾಜೇಶ್ವಲ ದೇಗುಲವನ್ನು ಸೇರಿಸಿ ದೇಗುಲ ಅಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ.ಇದರ ಜೊತೆಗೆ ಅತೀ ಹೆಚ್ಚು ಧಾರ್ಮಿಕ ಶೃದ್ದಾ ಕೇಂದ್ರಗಳಿರುವ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಬಹುತೇಕ ಎಲ್ಲಾ ದೈವ ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿವೆ.
ಹಾಗಾಗಿ ಈ ಎಲ್ಲಾ ದೈವ ದೇವಸ್ಥಾನಗಳಿಗೆ ಸರಕಾರದ ಧಾರ್ಮಿಕ ಧತ್ತಿ ಇಲಾಖೆಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಅನುದಾನವನ್ನು ನೀಡುವಂತೆಯೂ ಮನವಿ ಮಾಡಿದ್ದಾರೆ.
