ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ವ್ಯವಸಾಯಿಕ ಸಂಘದ ಕೇಂದ್ರ ಕಚೇರಿಗೆ ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಕೇಂದ್ರ ಕಚೇರಿಗೆ ಕಳ್ಳರು ನುಗ್ಗಿ ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ಶುಕ್ರವಾರ ಬೆಳಿಗ್ಗೆ ಬಯಲಿಗೆ ಬಂದಿದೆ.
ಪಿಪಿ ಕಿಟ್ ಧರಿಸಿ ಮುಖ ಮರೆಮಾಚಿಕೊಂಡು ಬಂದಿದ್ದ ಇಬ್ಬರು ಕಳ್ಳರು ಆರಂಭದಲ್ಲಿ ಸಹಕಾರಿ ಸಂಘಕ್ಕೆ ತಾಗಿಕೊಂಡಿರುವ ಸಂಘದ ನ್ಯಾಯಬೆಲೆ ಅಂಗಡಿ ಹಿಂಬದಿ ಗೋಡೆಗೆ ಕನ್ನ ಕೊರೆಯಲು ಯತ್ನಿಸಿದ್ದಾರೆ. ಆ ಬಳಿಕ ಸಂಘದ ಕಚೇರಿ ಎದುರಿನ ಶಟರನ್ನು ಪಿಕ್ಕಾಸ್ ಬಳಸಿ ಮುರಿದು ಒಳ ಪ್ರವೇಶಿಸಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಚೇರಿ ಒಳಗಿನ ಮೇಜು, ಕಪಾಟು ಜಾಲಾಡಿದ ಕಳ್ಳರು ಸೇಫ್ ಲಾಕರ್ ತೆರೆಯಲು ಸಾಧ್ಯವಾಗದೆ ಬರಿಗೈಯಲ್ಲಿ ಮರಳಿದ್ದಾರೆ. ಗ್ರಾಮಾಂತರ ಠಾಣೆ ಎಸೈ ಹರೀಶ್, ಕ್ರೈಮ್ ಎಸೈ ಸಂಜೀವ ಕೆ. ಮತ್ತಿತರರು ಬಂದು ಶ್ವಾನದಳ, ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿರುವುದಾಗಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ.
