ಕೈಕಂಬ : ಕಂಕನಾಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಾರಿ ಎಂಬಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬವೊಂದರ ೮ ವರ್ಷದ ಹೆಣ್ಣು ಮಗುವಿನ ಕೊಲೆಯಾದ ಮೃತದೇಹ ಫ್ಯಾಕ್ಟರಿ ಪಕ್ಕದಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಲಾಗಿದೆ.
ಗುರುಪುರ ಸೇತುವೆಯ ಹತ್ತಿರದ ಪರಾರಿ ಕ್ರಾಸ್ನಲ್ಲಿ ‘ ಫ್ಯಾಕ್ಟರಿಯೊಂದರಲ್ಲಿ ಅಸ್ಸಾಂ ಸಹಿತ ಉತ್ತರ ಭಾರತದ ೧೪ ಹುಡುಗರು, ನಾಲ್ಕೈದು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಅಸ್ಸಾಂ ಕುಟುಂಬದ ಮಹಿಳೆಯ ೮ ವರ್ಷದ ಹೆಣ್ಣು ಮಗು ಭಾನುವಾರ ಬೆಳಿಗ್ಗೆ ಸುಮಾರು ೧೧ ಗಂಟೆಯಿಂದ ನಾಪತ್ತೆಯಾಗಿತ್ತು. ಬಳಿಕ ಕೆಲಸಗಾರರು ಮತ್ತು ಸ್ಥಳೀಯರು ಮಗುವಿನ ಹುಡುಕಾಟ ಆರಂಭಿಸಿದರು. ಸಂಜೆ ಸುಮಾರು ೬:೩೦ ಗಂಟೆಗೆ ಫ್ಯಾಕ್ಟರಿಯ ಪಕ್ಕದಲ್ಲಿ(ಮೋರಿ ಬಳಿ !) ಮಗುವಿನ ಶವ ಪತ್ತೆಯಾಗಿದೆ. ಮಗುವಿನ ಮೈಮೇಲಿನ ಬಟ್ಟೆಬರೆ ಅನುಮಾನ ಹುಟ್ಟಿಸುವಂತೆ ಚೆಲ್ಲಾಪಿಲ್ಲಿಯಾಗಿದ್ದು, ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು ಕೊಲೆ ಮಾಡಿರಬೇಕೆಂದು ಅನುಮಾನಿಸಲಾಗಿದೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತೀಯರು ನಡೆಸಿರುವ ಕೃತ್ಯವಿರಬೇಕೆಂದು ಕೆಲವರು ಅನುಮಾನಿಸಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ಮುಂದುವರಿದಿದೆ.
ಕೊಲೆಯಾಗಿರುವ ಮಗುವಿನ ಮೇಲೆ ಅತ್ಯಾಚಾರದ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದ್ದು, ಪೋಸ್ಟ್ ಮಾರ್ಟ್ಂ ವರದಿ ಆಧರಿಸಿ ತನಿಖೆ ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಕಂಕನಾಡಿ ಗ್ರಾಮಾಂತರ ಪೊಲೀಸ್ ಮೂಲವೊಂದು ತಿಳಿಸಿದೆ.
