ಬೆಳ್ತಂಗಡಿ: ಗುರುಕುಲ ಕಲಾಪ್ರತಿಷ್ಠಾನ ರಾಜ್ಯ ಘಟಕ ತುಮಕೂರು ಇವರ ವತಿಯಿಂದ ತುಮಕೂರಿನ ಸಿದ್ಧಗಂಗಾಮಠದಲ್ಲಿ ಆಯೋಜಿಸಲಾಗಿದ್ದ ಗುರುಕುಲ ಕಲಾ ಪ್ರತಿಷ್ಠಾನದ ಪ್ರಥಮ ವರ್ಷದ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ಬೆಳ್ತಂಗಡಿ ತಾಲೂಕಿನ ಯುವ ಬರಹಗಾರ ಶ್ರೀಸಂತೋಷ್ರಾ ವ್ಪೆರ್ಮುಡ ಇವರಿಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರು ಮತ್ತು ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್ ನಾಗಭರಣ ಇವರು “ಗುರುಕುಲ ಸಾಹಿತ್ಯ ಶರಭ” ಪ್ರಶಸ್ತಿ ಪ್ರಧಾನ ಮಾಡಿದರು.
ಇವರು ಧಾರವಾಡದ ಜ್ಞಾನ ವಿಕಾಸ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಸುಮಾರು ಎಂಟಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು, ಇವರು ರಾಜ್ಯಮಟ್ಟದ ವಿವಿಧ ಪತ್ರಿಕೆಗಳಿಗೆ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ. ಗುರುಕುಲ ಕಲಾ ಪ್ರತಿಷ್ಠಾನವು ನೀಡುವ ಪುಸ್ತಕ ಪ್ರಶಸ್ತಿ ವಿಭಾಗದಲ್ಲಿ ಇವರು ಬರೆದಿರುವ “ದಿಕ್ಸೂಚಿ” ಎನ್ನುವ ಅಂಕಣ ಬರಹ ಪುಸ್ತಕದ ಸಾಧನೆಯನ್ನು ಪರಿಗಣಿಸಿ “ಗುರುಕುಲ ಸಾಹಿತ್ಯ ಶರಭ” ಪ್ರಶಸ್ತಿಯನ್ನು ನೀಡಲಾಯಿತು. ಹಿರಿಯ ಸಾಹಿತಿಗಳು ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ದೊಡ್ಡರಂಗೇಗೌಡ, ಕನ್ನಡ ಪುಸ್ತಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಶ್ರೀ ನಿಡಸಾಲೆ ಪುಟ್ಟ ಸ್ವಾಮಯ್ಯ, ಗುರುಕುಲ ಪ್ರತಿಷ್ಠಾನದ ಗೌರವ ರಾಜ್ಯಾಧ್ಯಕ್ಷರಾದ ವಿದ್ಯಾವಾಚ ಸ್ಪತಿ ಡಾ.ಕವಿತಾ ಕೃಷ್ಣ, ರಾಜ್ಯಾಧ್ಯಕ್ಷರಾದ ಹುಲಿಯೂರು ದುರ್ಗಲಕ್ಷ್ಮೀ ನಾರಾಯಣ, ರಾಜ್ಯ ಕಾರ್ಯಾಧ್ಯಕ್ಷರಾದ ಡಾ.ಶಿವರಾಜ ಗೌಡ ಹಾಗೂ ಸರ್ವಪದಾಧಿಕಾರಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ಸಂತೋಷ್ ರಾವ್ ಪೆರ್ಮುಡ ಇವರ ಈ ಸಾಧನೆಗೆ ಅವರ ಕುಟುಂಬದವರು, ಬಂಧುಮಿತ್ರರು, ಹಿತೈಷಿಗಳು ಶುಭವನ್ನು ಕೋರಿದ್ದಾರೆ.
