ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಈಗ ವಾರ್ಷಿಕ ನವರಾತ್ರಿ, ದಸರ, ಶಾರದಾ ಮಹೋತ್ಸವದ ಸಡಗರ. ಕರೋನಾದಿಂದ ಕಳೆದ ಎರಡು ವರ್ಷದಲ್ಲಿ ಉತ್ಸವ ಕಳೆಗುಂದಿದ್ದರೂ ಈ ಬಾರಿ ಸಾರ್ವಜನಿಕ ಮೆರವಣಿಗೆ ಹೊರತಾಗಿಯೂ ದೇವಸ್ಥಾನದೊಳಗೆ ವೈಭವದಿಂದ ಸಕಲ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಸಂಜೆಯಾಗುತ್ತಲೇ ಹೆಚ್ಚೆಚ್ಚು ಭಕ್ತರು ಆಗಮಿಸುತ್ತಿದ್ದು, ದೇವರ ಕಂಡು ಪುನೀತರಾಗುತ್ತಿದ್ದಾರೆ.20kudroli

ಹಿಂದೆ ಮಂಗಳೂರಿಗರೇ ತಮ್ಮ ಪ್ರದೇಶಗಳಲ್ಲಿ ಸ್ವಂತ ಖರ್ಚಿಂದ ನವರಾತ್ರಿಯ 9 ದಿನಗಳಲ್ಲಿ ವಿದ್ಯುತ್ ದೀಪ ಅಲಂಕರಿಸಿ ಮಂಗಳೂರು ದಸರಾಕ್ಕೆ ಅನನ್ಯ ಮೆರಗು ತರುತ್ತಿದ್ದರೆ, ಈ ವರ್ಷ ಮಂಗಳೂರು ನಗರ ಪಾಲಿಕೆ ವತಿಯಿಂದಲೇ ನಗರದ ವಿದ್ಯುದ್ದೀಪ ಲಭಿಸಿದೆ. ಸಂಜೆಯಾಗುತ್ತಲೇ ಮಂಗಳೂರಿನ ಉದ್ದಗಲಕ್ಕೂ ಝಗಮಗಿಸುವ ವಿದ್ಯುತ್ ದೀಪಗಳ ಚಿತ್ತಾರ !. ಸಾಲು ಕಂಬಗಳಲ್ಲಿ ದೀಪಗಳು, ಮರಗಳ ಸುತ್ತುಬಳಸಿ ಎತ್ತರಕ್ಕೆ ಹಾಯ್ದ ದೀಪಗಳು, ರಸ್ತೆಯ ಜಂಕ್ಷನ್‌ಗಳಲ್ಲಿ ಬಣ್ಣಬಣ್ಣದ ದೀಪಗಳು, ಮನೆ-ಕಟ್ಟಡಗಳ ಮೇಲ್ಛಾವಣಿಗಳಲ್ಲಿ ಅಂಕುಡೊ0ಕಿನ ವಿದ್ಯುತ್ ಬಳ್ಳಿಗಳು, ….ಮಂಗಳೂರಿನ ರಾತ್ರಿ ಕತ್ತಲ ಓಡಿಸಿದಂತಿವೆ. ನೋಡುಗರ ಕಣ್ಣಿಗೆ ಹಬ್ಬದ ವಾತಾವರಣ. ಆಬಾಲವೃದ್ಧರಿಗೆ ಮುದ ನೀಡುವ ಇಲ್ಲಿನ ದೀಪಾಲಂಕಾರ ಭಕ್ತ ಸಮುದಾಯಕ್ಕೆ ಕರೆಯೋಲೆ ನೀಡಿದಂತಿದೆ. ಇದೇ ರೀತಿ ಅ. 15ರವರೆಗೆ ಮಂಗಳೂರು ವಿದ್ಯುತ್ ವಿಶಿಷ್ಟತೆಗೆ ಸಾಕ್ಷಿಯಾಗಲಿದೆ.001

ದೇವಸ್ಥಾನದೊಳಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದಿದ್ದರೂ ನವದುರ್ಗೆಯರ ಮಂಟಪದೊಳಗೆ ಮನಶಾಂತಿ ನೀಡುವ ಭಜನಾ ಕಾರ್ಯಕ್ರಮ, ಸ್ಕ್ರಿನ್ ಮೇಲೆ ನೃತ್ಯ, ಹಾಡುಗಾರಿಕೆ ನೋಡಬಹುದಾಗಿದೆ. ಗೋಪುರಾಕೃತಿಯ ದೇವಸ್ಥಾನದ ತುತ್ತತುದಿಯಿಂದ ಪ್ರಾಕಾರ-ಪ್ರಾಂಗಣದೊಳಗೆ, ನವದುರ್ಗೆಯರ ಮಂಟಪದೊಳಗೆ ವಿಶಿಷ್ಟ ವಿದ್ಯುತ್ ದೀಪಗಳ ಸಜಾವಟ್ಟು ಮಾಡಲಾಗಿದೆ. ಪುಟಿದೇಳುವ ಕಾರಂಜಿಗೆ ಬಣ್ಣದ ಮೆರಗು !.002

ದೇವಸ್ಥಾನದ ದ್ವಾರದಿಂದ ಪ್ರಾಂಗಣದವರೆಗೆ ಎರಡೂ ಮಗ್ಗುಲುಗಳಲ್ಲಿ ಸಂತೆಯ ಸಾಲು. ಭಕ್ತ-ಜನಸ್ತೋಮದ ಮಧ್ಯೆಯಿಂದ ಆಕಸ್ಮಿಕವಾಗಿ ಹರಡಬಹುದಾದ ಕೊರೋನಾ ಸಾಂಕ್ರಾಮಿಕ ರೋಗ ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಮುಖವೇರಿಸಿಕೊಂಡಿರುವುದು ಈ ಬಾರಿಯ ದಸರಾ ವಿಶೇಷವಾಗಿದೆ !. ದೇವರ ಮೇಲಿನ ಭಯ ಭಕ್ತಿಯೊಂದಿಗೆ ಕೊರೋನಾ ಮಹಾಮಾರಿಯ ಭಯವೂ ಭಕ್ತರ ಮನಸ್ಸಿನಲ್ಲಿ ಜಾಗೃತಗೊಂಡಿರುವುದಕ್ಕೆ ಇದು ಸಾಕ್ಷಿಯಾಗಿದೆ.

ಬರೆಹ : ಧನ್ಯಶ್ರೀ

 

By suddi9

Leave a Reply

Your email address will not be published. Required fields are marked *