ಮೂಡುಬಿದಿರೆ: ಶಿರ್ತಾಡಿ ಗ್ರಾಮ ಪಂಚಾಯಿತಿ ಕುಂಟಲ ಪ್ರದೇಶ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಆರು ತಿಂಗಳೊಳಗೆ ದುರಸ್ತಿಯಾಗದಿದಲ್ಲಿ ಪಂಚಾಯಿತಿ ಕಚೇರಿ ಎದುರು ಧರಣಿ ಮಾಡುತ್ತೇವೆ ಎಂದು ಪ್ರದೇಶದ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳು ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂಡುಬಿದಿರೆ ನಗರ-ಶಿರ್ತಾಡಿ ಮಾರ್ಗದ ಮಾವಿನ ಕುಕ್ಕುದ ಕಟ್ಟೆ ಎಂಬಲ್ಲಿಂದ ಕವಲೊಡೆದು ಕುಂಟಲ ಎಂಬ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರ ಮಾತ್ರವಲ್ಲ, ಅಸಾಧ್ಯವಾಗಿರುವ ಸ್ಥಿತಿಯಲ್ಲಿದೆ. ಸುಮಾರು 25ಕುಟುಂಬಗಳು ನಿತ್ಯ ಪ್ರಯೋಜನ ಪಡೆಯುವ ರಸ್ತೆ ಇದಾಗಿದ್ದು, ಪ್ರತಿನಿತ್ಯ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮಹಿಳೆಯರು, ಆಸ್ಪತ್ರೆಗಳಿಗೆ, ಇನ್ನಿತರ ಕೆಲಸ ಕಾರ್ಯಗಳಿಗೆ ಈ ರಸ್ತೆಯ ಮುಖಾಂತರವೇ ಓಡಾಟ ನಡೆಸಬೇಕು ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಸ್ಥಳೀಯಾಡಳಿತ, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದಾರೆ.
ಕಾರ್ಮಿಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷೆ ಪದ್ಮಶ್ರೀ ನಿಡ್ಡೋಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಹಾಗೂ ಸ್ಥಳೀಯರ ಬೆಂಬಲಕ್ಕೆ ನಿಂತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ದ್ವಿತೀಯ ಪಿ.ಯು ವಿದ್ಯಾರ್ಥಿ ಧನುಷ್ ಪಿ, ಹತ್ತನೇ ತರಗತಿಯ ನಿಶಾ ಎಂ, ದ್ವಿತೀಯ ಪಿ.ಯು ವಿದ್ಯಾರ್ಥಿನಿ ಸುಶ್ಮಿತಾ, ಆರನೇ ತರಗತಿಯ ಹರ್ಷಿತ್ ಹಾಗೂ ಎಂಟನೇ ತರಗತಿಯ ನಿರೀಕ್ಷಾ ಪಾಲ್ಗೊಂಡಿದ್ದರು.
