ಕೈಕಂಬ : ತೆಂಕುತಿಟ್ಟಿನ ಮೇರು ಕಲಾವಿದ, ಸುಮಾರು ಆರು ದಶಕಗಳ ಕಾಲ ತಿರುಗಾಟ ನಡೆಸಿರುವ ಸಂಪಾಜೆ ಶೀನಪ್ಪ ರೈ(78) ಇಂದು ಬೆಳಿಗ್ಗೆ ಸುದೀರ್ಘ ಕಾಲದ ಅನಾರೋಗ್ಯದಿಂದ ವಿಧಿವಶರಾದರು.
ಮೂಲತಃ ಸುಳ್ಯ ಸಂಪಾಜೆಯವರಾದ ರೈಯವರು, ಇತ್ತೀಚಿನ ಕೆಲವು ವರ್ಷಗಳಿಂದ ಪುತ್ರನ ಸುರತ್ಕಲ್ ಮನೆಯಲ್ಲಿ ವಾಸಿಸುತ್ತಿದ್ದರು. ಕೊನೆಯದಾಗಿ ಹನುಮಗಿರಿ ಯಕ್ಷಗಾನ ಮೇಳದಲ್ಲಿ ತಿರುಗಾಟ ನಡೆಸಿದ್ದರು.
ಆರಂಭದಿ0ದ ಹಲವು ವರ್ಷ ಕಟೀಲು ಮೇಳದಲ್ಲಿ ಬಣ್ಣ ಹಚ್ಚಿದ್ದ ಇವರು, ಎಡನೀರು ಮತ್ತು ಹೊಸನಗರ ಯಕ್ಷಗಾನ ಮೇಳಗಳಲ್ಲೂ ತಿರುಗಾಟ ನಡೆಸಿದ್ದರು. ರಕ್ತ ಬೀಜಾಸುರ, ಹಿರಣ್ಯಾಕ್ಷ, ಶಿಶುಪಾಲ ಮೊದಲಾದ ರಕ್ಕಸ ಪಾತ್ರಗಳ ಮೂಲಕ ಯಕ್ಷ ಪ್ರೇಮಿಗಳನ್ನು ರಂಜಿಸಿದ್ದರು. ಇವರಿಗೆ ಪತ್ನಿ , ಪುತ್ರ , ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
