ಕೈಕಂಬ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ‘ಗೌರವ ಪ್ರಶಸ್ತಿ’ ಮತ್ತು ‘ಗೌರವ ಪುರಸ್ಕಾರ’ ಪ್ರಕಟವಾಗಿದ್ದು, ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಸೇರಿದಂತೆ ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರ, ಬ್ಯಾರಿ ಕಲೆ ಮತ್ತು ಸಾಹಿತ್ಯ ಕ್ಷೇತ್ರ, ಬ್ಯಾರಿ ಸಂಸ್ಕೃತಿ ಮತ್ತು ಸಮಾಜಸೇವೆ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂವರಿಗೆ ‘ಗೌರವ ಪ್ರಶಸ್ತಿ’ ಹಾಗೂ ಆರು ಮಂದಿ ‘ಗೌರವ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ.
ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಹರೇಕಳ ಹಾಜಬ್ಬ, ಬ್ಯಾರಿ ಕಲೆ ಮತ್ತು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಹುಸೈನ್ ಕಾಟಿಪಳ್ಳ ಮತ್ತು ಬ್ಯಾರಿ ಸಂಸ್ಕೃತಿ ಮತ್ತು ಸಮಾಜಸೇವೆಗಾಗಿ ಡಾ.ಇ.ಕೆ.ಎ.ಸಿದ್ದೀಕ್ ಆಡ್ಡೂರು ಅವರನ್ನು ‘ಬ್ಯಾರಿ ಗೌರವ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.
ಗೌರವ ಪುರಸ್ಕಾರಕ್ಕೆ ಅಶ್ರಫ್ ಅಪೋಲೋ (ಬ್ಯಾರಿ ಸಂಗೀತ ಕ್ಷೇತ್ರ), ಡಾ.ಕೆ.ಎ.ಮುನೀರ್ ಬಾವ(ಬ್ಯಾರಿ ಸಂಘಟನೆ ಕ್ಷೇತ್ರ), ಮರಿಯಮ್ ಫೌಝಿಯ ಬಿ.ಎಸ್. (ಬ್ಯಾರಿ ಮಹಿಳಾ ಸಾಧಕಿ), ಬ್ಯಾರಿ ಝುಲ್ಫಿ(ಬ್ಯಾರಿ ಯುವ ಪ್ರತಿಭೆ), ಮುಹಮ್ಮದ್ ಬಶೀರ್ ಉಸ್ತಾದ್(ಬ್ಯಾರಿ ದಫ್ ಕ್ಷೇತ್ರ) ಹಾಗೂ ಮುಹಮ್ಮದ್ ಫರಾಝ್ ಅಲಿ(ಬ್ಯಾರಿ ಬಾಲ ಪ್ರತಿಭೆ) ಆಯ್ಕೆಯಾಗಿದ್ದಾರೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗೌರವ ಪ್ರಶಸ್ತಿಯು ರೂ.50,000 ನಗದು, ಶಾಲು, ಹಾರ, ಫಲ ತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಪುರಸ್ಕಾರವು ರೂ.10,000 ನಗದು ಶಾಲು, ಹಾರ, ಸ್ಮರಣಿಕೆ ಮತ್ತು ಪುರಸ್ಕಾರ ಪತ್ರಗಳನ್ನು ಒಳಗೊಂಡಿರುತ್ತದೆ.
ಕೋರೋನದ ತೀವ್ರತೆ ಸಂಪೂರ್ಣವಾಗಿ ಕಡಿಮೆಯಾದ ಬಳಿಕ, ಎಲ್ಲವೂ ಸಹಜ ಸ್ಥಿತಿಗೆ ಮರಳಿದ ಬಳಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.
