ಮೂಡಬಿದಿರೆ: ರಾಜ್ಯ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿದ ಕೋವಿಡ್ ಪ್ಯಾಕೇಜ್ನಲ್ಲಿ ಕಾರ್ಮಿಕರಿಗೆ ಪ್ರತಿ ತಿಂಗಳಿಗೆ ಮಾಸಿಕ 10,000 ಮೂರು ತಿಂಗಳಿಗೆ ಬಿಡುಗಡೆ ಮಾಡಬೇಕೆಂದು ಮೂಡುಬಿದಿರೆ ಬ್ಲಾಕ್ ಯುವ ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಸುಚಿನ್ ಮಡಿವಾಳ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿದ ಕೋವಿಡ್ ಪ್ಯಾಕೇಜ್ನಲ್ಲಿ ಕಾರ್ಮಿಕರಿಗೆ 2,000, 3,000 ಪರಿಹಾರ ಧನ ಎಂದು ಘೋಷಣೆ ಮಾಡಿತ್ತು. ಆದರೆ, ಮೊದಲೇ ಕೋವಿಡ್ನಿಂದ ಬಹಳಷ್ಟು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಅದರ ಮೇಲೆ ಅದರಲ್ಲೂ ಕಟ್ಟಡ ನಿರ್ಮಾಣ ಕಾರ್ಮಿಕರು, ತಮ್ಮ ದಿನಗೂಲಿ ಇಲ್ಲದೇ ಮನೆಯಲ್ಲೇ ಇರುವಂಥ ಪರಿಸ್ಥಿತಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಖರ್ಚುಗಳ ಜೊತೆಗೆ ದೈನಂದಿನ ಖರ್ಚುಗಳು ಹೆಚ್ಚುತ್ತಿದ್ದು, ಅನೇಕರು ಸಾಲದ ಮೊರೆ ಹೋಗಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಘೊಷಿಸಿರುವ 3,000 ಪರಿಹಾರ ಧನ ಏನೇನು ಸಾಲುವುದಿಲ್ಲ. ಆದ್ದರಿಂದ ಕೂಡಲೇ ಕಾರ್ಮಿಕರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಬೇಡಿಕೆಯಾಗಿ ಪ್ರತಿ ತಿಂಗಳಿಗೆ ಮಾಸಿಕ 10,000 ನ್ನು ಮೂರು ತಿಂಗಳಿಗೆ ಬಿಡುಗಡೆ ಮಾಡಬೇಕೆಂದು ಸುಚಿನ್ ಮಡಿವಾಳ ಅವರು ಆಗ್ರಹಿಸಿದರು.
ಅದರ ಜೊತೆಗೆ ಕಳೆದ ವರ್ಷ ಘೋಷಿಸಲಾದ ಕೋವಿಡ್ 5,000 ಪರಿಹಾರ ಹಣ ಬಾಕಿ ಇರುವ 1 ಲಕ್ಷ ಕಾರ್ಮಿಕರಿಗೆ ಕೂಡಲೇ ಹಣ ವರ್ಗಾವಣೆ ಮಾಡಬೇಕು. ಕೋವಿಡ್-19ರ ಸೋಂಕಿನಿಂದ ಮೃತಪಡುವ ನೋಂದಾಯಿತ ಪ್ರತಿ ಕಾರ್ಮಿಕ ಅಥವಾ ಸಾವಿಗೀಡಾಗುವ ಕುಟುಂಬದ ಸದಸ್ಯರಿಗೆ ಕನಿಷ್ಠ 10 ಲಕ್ಷ ವಿಶೇಷ ಪರಿಹಾರಧನ ಪ್ರಕಟಿಸಬೇಕು. ನೋಂದಾಯಿತರಲ್ಲದ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಕನಿಷ್ಠ 5 ಲಕ್ಷ ಪರಿಹಾರ ನೀಡಬೇಕು ಮತ್ತು ಕೋವೀಡ್ ಸೋಂಕಿಗೊಳಗಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವ ಕಟ್ಟಡ ಕಾರ್ಮಿಕರ ಮತ್ತು ಅವರ ಕುಟುಂಬದವರ ಸಂಪೂರ್ಣ ಚಿಕಿತ್ಸಾ ವೆಚ್ಚ ಮಂಡಳಿಯೇ ಭರಿಸಬೇಕು ಎಂದು ಮೂಡಬಿದ್ರಿ ಬ್ಲಾಕ್ ಯುವ ಇಂಟೆಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಚಿನ್ ಮಡಿವಾಳ ಆಗ್ರಹಿಸಿದ್ದಾರೆ.
