ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ಕೇದಗೆ ಎಂಬಲ್ಲಿ ಶ್ರೀ ವೀರಭದ್ರ ದೇವರು, ನಾಲ್ಕೈತ್ತಾಯ ಪಂಜುರ್ಲಿ, ಮಹಾಂಕಾಳಿ ಹಾಗೂ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಜ. 13ರಿಂದ 15ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್ ಹೇಳಿದರು.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ ಕಾರಂತರ ಮಾರ್ಗದರ್ಶನದಲ್ಲಿ ಪುನರ್ ನಿರ್ಮಾಣಗೊಂಡ ಸಾನಿಧ್ಯದಲ್ಲಿ ಸ್ಥಳೀಯ ತಂತ್ರಿ ವಾಸುದೇವ ಕಾರಂತರ ನೇತೃತ್ವದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಕಾರ್ಯ ನಡೆಯಲಿದೆ.

ಪಾಣೆಮಂಗಳೂರು ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದಿಂದ 6 ಕಿ.ಮೀ. ದೂರದಲ್ಲಿ , ನರಿಕೊಂಬು ಮೊಗರ್ನಾಡು ಅಂತರ ಏರಮಲೆಯಾಗಿ ಕ್ಷೇತ್ರಕ್ಕೆ ನೂತನ ಸಂಪರ್ಕ ರಸ್ತೆಯು ಇದ್ದು, 65 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎಂದರು.
ಬಂಟ್ವಾಳ ತಾಲೂಕಿನ ಕೇದಗೆಯಲ್ಲಿ ಜೀರ್ಣೋದ್ದಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿರುವ ಶ್ರೀ ವೀರಭದ್ರ ದೇವಸ್ಥಾನ ಮತ್ತು ಪರಿವಾರ ದೈವಗಳ ದೈವಸ್ಥಾನಗಳು ಕೆಳದಿ ಸಂಸ್ಥಾನದ ಇಕ್ಕೇರಿಯ ಅರಸರಿಂದ ಸ್ಥಾಪಿತವಾಗಿದ್ದಾಗಿ ಗುರುರಾಜ ಭಟ್ಟರ ತುಳುನಾಡಿದ ದೇವಸ್ಥಾನಗಳು ಐತಿಹ್ಯ ಸಂಗ್ರಹದಿಂದ ತಿಳಿದುಬರುತ್ತದೆ ಎಂದರು.,
ಬ್ರಹ್ಮಕಲಶೋತ್ಸವದ ಜ. 13ರಂದು ಬುಧವಾರ ಬೆಳಗ್ಗೆ 10.30ಕ್ಕೆ ಉಗ್ರಾಣ ಮುಹೂರ್ತ, ಅಪರಾಹ್ನ 3ರಿಂದ ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಿಂದ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ನಡೆಯಲಿದೆ. 14ರಂದು ಗುರುವಾರ ಹೋಮ ಹವನ ಸಹಿತ ವಿವಿಧ ಧಾರ್ಮಿಕ ಮತ್ತು ವೈಽಕ ಕಾರ್ಯಕ್ರಮಗಳು ನಡೆಯುವುದು. 15ರಂದು ಶುಕ್ರವಾರ ಬೆಳಗ್ಗೆ ಘಂಟೆ 10.53ಕ್ಕೆ ನವೀಕೃತ ದೇವಸ್ಥಾನದಲ್ಲಿ ದೇವರ ಪ್ರತಿಷ್ಠೆ – ಬ್ರಹ್ಮಕಲಶೋತ್ಸವ ವಿವಿಧ ವೈದಿಕ ಮತ್ತು ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ಬ್ರಹ್ಮಕಲಶೋತ್ಸವದ ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ವಸತಿ ಸಚಿವ ಬಿ. ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ.ಪ್ರಭಾಕರ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಭಾಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ.ಸದಸ್ಯರಾದ ಕಮಲಾಕ್ಷಿ ಕೆ.ಪೂಜಾರಿ, ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು. ಅದೇ ದಿನ ರಾತ್ರಿ ೬ರಿಂದ ನಾಲ್ಕೈತ್ತಾಯ, ಪಂಜುರ್ಲಿ ದೈವಗಳ ನೇಮೋತ್ಸವ ನಡೆಯುವುದು ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಘು ಸಫಲ್ಯ ನರಿಕೊಂಬು, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಗಾಣಿಗ ಮಾಣಿಮಜಲು, ಕೋಶಾಧಿಕಾರಿ ರಮೇಶ್ ಬೋರುಗುಡ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಅಂತರ, ಪ್ರಮುಖರಾದ ಶ್ರೀಷ ರಾಯಸ ಮತ್ತಿತರರು ಉಪಸ್ಥಿತರಿದ್ದರು.

By Suddi9 Author

Suddi9

Leave a Reply

Your email address will not be published. Required fields are marked *