ಬಂಟ್ವಾಳ: ನಿರ್ದಿಷ್ಟ ಕ್ಷೇತ್ರದಲ್ಲಿ ಅಪೂರ್ವ ಸಾಧನೆಮಾಡಿದ ಸಾಧಕರು ಕೆಲವರಾದರೆ , ಹತ್ತು ಹಲವು ಕ್ಷೇತ್ರದಲ್ಲಿ ಆಸಕ್ತಿ ಹಾಗೂ ಅಪಾರ ಜ್ಞಾನವನ್ನು ಹೊಂದಿ ಇತರರಿಗೆ ಮಾರ್ಗದರ್ಶಕರಾಗುವವರು ಇನ್ನು ಹಲವರು.ದಿವಂಗತ ಪ್ರೊ. ಕೇಶವ ಉಚ್ಚಿಲರು ಎರಡನೆಯ ವರ್ಗಕ್ಕೆ ಸೇರಿದವರು ಎಂದು ಹಿರಿಯ ಕೊಂಕಣಿ ಸಾಹಿತಿ ಬಸ್ತಿ ವಾಮನ ಶೆಣೈ ಹೇಳಿದರು. ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ನಡೆದ ಇತ್ತೀಚೆಗೆ ನಿಧನರಾದ ಹಿರಿಯ ವಿದ್ವಾಂಸ ಪ್ರೊ ಕೇಶವ ಉಚ್ಚಿಲರ ‘ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧ್ಯಾರ್ಥಿ ಬಳಗ ಉಚ್ಚಿಲರ ಜ್ಞಾನದಾಹದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಆಶಿಸಿದರು.
ಎಸ್ ವಿ ಎಸ್ ಕಾಲೇಜಿನ ಕನ್ನಡ ವಿಭಾಗದ ಮಾಜಿ ಮುಖ್ಯಸ್ಥ ಪ್ರೊ. ರಾಜಮಣಿ ರಾಮಕುಂಜ ಮಾತನಾಡಿ, ಉಚ್ಚಿಲರು ಕನ್ನಡ ವಿಭಾಗದಲ್ಲಿರುವಾಗಿನ ಸಂಬಂಧಗಳನ್ನು ಮೆಲುಕು ಹಾಕುತ್ತಾ, ಕನ್ನಡ ವಿಭಾಗದ ಘನತೆಯನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ, ಯಕ್ಷಗಾನ ಕೇಂದ್ರ ಬೆಳೆಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಮಾತನಾಡಿ, ಉಚ್ಚಿಲರು ಒರ್ವ ನಡೆದಾಡುವ ವಿಶ್ವಕೋಶವೆಂದು ಬಣ್ಣಿಸಿದರಲ್ಲದೆ ಅವರ ನಿಧನ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವೆಂದರು. ಎಸ್ ವಿ ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಾಂಡುರಂಗ ನಾಯಕ್, ಪುತ್ರ ಅಶ್ವಿನ್ ಉಚ್ಚಿಲ್ ಸಮಯೋಚಿತವಾಗಿ ಮಾತನಾಡಿದರು.
ಪ್ರೊ ಅನಂತ ಪದ್ಮನಾಭರವರು ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಅಶ್ವಿನ್ ಕುಮಾರ್ ರೈ ಬಿ.ಸಿ.ರೋಡ್, ಕಿಶೋರ್ ಕುಮಾರ್, ಪ್ರೊ ವೆಂಕಪ್ಪ ಗೌಡ, ಫ್ರೊ ಎಸ್. ಆರ್ ಮಡಿವಾಳ್, ಪ್ರೊ ಕೆ.ಪಿ ಸೂಫಿ, ರಾಜಾ ಬಂಟ್ವಾಳ್, ಸತೀಶ್ ಹೊಳ್ಳ, ದಾಮೋದರ, ಡಾ. ಆಶಾಲತಾ ಮುಂತಾದವರು ನುಡಿನಮನ ಸಲ್ಲಿಸಿದರು.
