ಮೂಡುಬಿದಿರೆ: ನಮ್ಮ ಸಾಂಪ್ರದಾಯಿಕ ವಿದ್ಯಾ ತತ್ವಗಳನ್ನು ತಳಹದಿಯಾಗಿಸಿ ಸಮಗ್ರ ಹಾಗೂ ಬಹುಶಿಸ್ತೀಯ ವಿಧಾನವನ್ನು ಶಿಕ್ಷಣ ರಂಗಕ್ಕೆ ಪರಿಚಯಿಸುವ ವಿನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ. ಈ ಮೂಲಕ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ತಯಾರಿಗೊಳಿಸಿ ನಾಲ್ಕನೇ ಕೈಗಾರಿಕಾ ಕ್ರಾಂತಿ ಸಮಯದಲ್ಲಿ ಭಾರತವನ್ನು ಮುಂಚೂಣಿ ರಾಷ್ಟ್ರವಾಗಿಸುವ ಯೋಜನೆ ಕೇಂದ್ರದ ಮುಂದಿದೆ ಎಂದು ಸುರತ್ಕಲ್ ಎನ್ಐಟಿಕೆಯ ಬೋರ್ಡ್ ಆಫ್ ಗವರ್ನರ್ಸ್ ಅಧ್ಯಕ್ಷ ಡಾ.ಕೆ.ಬಲವೀರ ರೆಡ್ಡಿ ಹೇಳಿದರು.
ಮೂಡುಬಿದಿರೆ ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಲಾದ `ರಾಷ್ಟ್ರೀಯ ಶಿಕ್ಷಣ ನೀತಿ- ಶಿಕ್ಷಕರ ಪಾತ್ರ’ ವೆಬಿನಾರ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ನೂತನ ಶಿಕ್ಷಣ ನೀತಿಯು ಪಠ್ಯ ಕ್ರಮದಲ್ಲಿ, ಬೋಧನಾ ವಿಧಾನಗಳಲ್ಲಿ ಹಾಗೂ ಉನ್ನತ ಶಿಕ್ಷಣ ವಲಯದಲ್ಲಿ ಆಮೂಲಾಗ್ರ ಬದಲಾವಣೆ ತರಲಿದ್ದು, ಬದಲಾದ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲಿದೆ. ಇದರ ಜತೆಗೆ ರಾಷ್ಟ್ರ, ಭಾರತೀಯ ತತ್ವಗಳು, ಸಾಂವಿಧಾನಿಕ ಮೌಲ್ಯಗಳಿಗೆ ಈ ನೀತಿ ಒತ್ತು ಕೊಡಲಿದೆ ಎಂದು ಅಭಿಪ್ರಾಯಪಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಸಂಸ್ಥೆಯ ಪ್ಲೇಸ್ಮೆಂಟ್ ಅಧಿಕಾರಿ ಸುಶಾಂತ್ ಅನಿಲ್ ಲೋಬೊ ಉಪಸ್ಥಿತರಿದ್ದರು. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಮೇಘಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು ಪಾಲ್ಗೊಂಡರು.
