ಮೂಡುಬಿದಿರೆ:ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಮೂಡುಬಿದಿರೆ ವಲಯ ಸಿಐಟಿಯು ವತಿಯಿಂದ ಬಸ್ ನಿಲ್ದಾಣ ಪ್ರವೇಶಧ್ವಾರದ ಎದುರು ಗುರುವಾರ ಪ್ರತಿಭಟನಾ ಸಭೆ ನಡೆಯಿತು. ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ,
ದೇಶದಲ್ಲಿ ಕಾರ್ಮಿಕರ, ರೈತರ ಹೋರಾಟಗಳನ್ನು ಹತ್ತಿಕ್ಕುವಂತಹ ಪ್ರಯತ್ನವು ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ.
ಕಾರ್ಮಿಕ ಸಂಘಗಳ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವ ಬದಲು ಸರ್ಕಾರವು ಖಾಸಗಿಯವರ ಹಿತಕ್ಕಾಗಿ ಪ್ರಯತ್ನಿಸುತ್ತಿದೆ. ನಮ್ಮ ಹಕ್ಕುಗಳ ರಕ್ಷಣೆ ಮಾಡುವ ಬದಲು, ಕಾರ್ಮಿಕರ, ದೇಶದ ಬಡಜನರಿಗೆ ಮರಣ ಶಾಸನವಾಗುವಂತೆ ಕೇಂದ್ರ ಸರ್ಕಾರವು ಕಾಯ್ದೆಗಳ ತಿದ್ದುಪಡಿ ಮಾಡುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳ, ಖಾಸಗಿಯವರ ಕೈಗೆ ದೇಶದ ವ್ಯವಸ್ಥೆಯನ್ನು ಕೊಟ್ಟು, ಕೋಟ್ಯಾಂತರ ರೂಪಾಯಿ ಹಗರಣವನ್ನು ಕೇಂದ್ರ ಸರ್ಕಾರವು ಮಾಡುತ್ತಿದೆ ಎಂದು ಆರೋಪಿಸಿದರು.
ಸಿಐಟಿಯು ಮೂಡುಬಿದಿರೆ ವಲಯ ಅಧ್ಯಕ್ಷೆ ರಮಣಿ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಆಲ್ವಿನ್ ಮೆನೇಜಸ್, ಹೋರಾಟದ ಪ್ರಮುಖರಾದ ಕೃಷ್ಣಪ್ಪ ಕೊಣಾಜೆ,ಗಿರಿಜಾ, ರಾಧ, ರಿಯಾಜ್, ಶಂಕರ್ ವಾಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
