ಮೂಡುಬಿದಿರೆ: ಕಂಡದಲೆ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಮದುವೆಗೆ ಬಂದಿದ್ದ ಮೂವರು ಯುವಕರು ಹಾಗೂ ಓರ್ವ ಯುವತಿ ಮಂಗಳವಾರ ಸಾಯಂಕಾಲ ನೀರುಪಾಲಾಗಿದ್ದು, ಆ ದಿನವೇ ಇಬ್ಬರ ಶವವು ಹೊಳೆಯಲ್ಲಿ ಪತ್ತೆಯಾಗಿತ್ತು. ಬುಧವಾರ ನೀರುಪಾಲಾದ ಮತ್ತಿಬ್ಬರ ಶವವೂ ಪತ್ತೆಯಾಗಿದೆ.
ಕಡಂದಲೆ ಬರಿಯಡ್ಕದ ಶ್ರೀಧರ ಆಚಾರ್ಯರ ಮಗನ ಮದುವೆ ಸಮಾರಂಭಕ್ಕೆ ಬಂದಿದ್ದ ಮೂಡುಶೆಡ್ಡೆಯ ಹರ್ಷಿತಾ ಆಕೆಯ ಸಹೋದರ ನಿಖಿಲ್, ಸಂಬಂಧಿಕರಾದ ವೇಣೂರಿನ ಸುಭಾಸ್ ಹಾಗೂ ಬಜ್ಪೆ ಪೆರಾರಿನ ರವಿ ಆಚಾರ್ಯ ಅವರು ತಮ್ಮ ಇತರ ಸಂಬಂಧಿಕರೊಂದಿಗೆ ಮಂಗಳವಾರ ಮನೆ ಬಳಿಯ ತುಲೆಮುಗೇರ್ ಎಂಬಲ್ಲಿ ಹೊಳೆಗೆ ಇಳಿದಿದ್ದರು. ಆಳವಿದ್ದು, ಈಜಲು ಬಾರದೇ ನಾಲ್ವರು ಮೃತಪಟ್ಟಿದ್ದರು. ಹರ್ಷಿತಾ ಹಾಗೂ ಸುಭಾಸ್ ಮೃತದೇವ ಮಂಗಳವಾರ ಸಾಯಂಕಾಲವೇ ಪತ್ತೆಯಾಗಿತ್ತು.
ಕತ್ತಲಾಗುವವರೆಗೆ ರವಿ ಆಚಾರ್ಯ ಹಾಗೂ ನಿಖಿಲ್ ಅವರ ಮೃತದೇಹವು ಪತ್ತೆಯಾಗಿರದ ಕಾರಣ, ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಬುಧವಾರ ಬೆಳಗ್ಗೆ ಕಾರ್ಯಾಚರಣೆ ಮುಂದಿವರಿದಿದ್ದು, ಇಬ್ಬರ ಶವವೂ ಪತ್ತೆಯಾಗಿದೆ. ಮೂಡುಬಿದಿರೆ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಹಾಗೂ ಮಂಗಳೂರಿನ ಮತ್ತು ಸ್ಥಳೀಯ ಈಜು ತಜ್ಞರು ಮೃತದೇಹವನ್ನು ಹೊಳೆ ನೀರಿನಿಂದ ಮೇಲಕ್ಕೆತ್ತಿದ್ದಾರೆ. ನಾಲ್ವರ ಮೃತದೇಹವನ್ನು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ಮಾಡಿ, ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
