ಮೂಡುಬಿದಿರೆ: ದಿನಕೂಲಿ ಕಾರ್ಮಿಕರ ಸಂಘಟನೆಯಾಗಿರುವ ಅಖಿಲ ಕರ್ನಾಟಕ ರಾಜಕೇಸರಿ ಬೆಳ್ತಂಗಡಿ ಮತ್ತು ಮೂಡುಬಿದಿರೆ ತಾಲೂಕು ಘಟಕ ಇವುಗಳ ಆಶ್ರಯದಲ್ಲಿ ನಿರ್ಮಾಣವಾಗಿರುವ 32ನೇ ಆಸರೆ ಮನೆಯನ್ನು ಅನಾರೋಗ್ಯ ಪೀಡಿತ ದರೆಗುಡ್ಡೆಯ ರಾಜೇಶ್ ಪೂಜಾರಿ ಅವರಿಗೆ ಭಾನುವಾರ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಹಸ್ತಾಂತರಿಸಿದರು.
ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ಕಾರ್ಯಕ್ರಮ ಉದ್ಘಾಟಿಸಿದರು. ಸಾಮಾಜಿಕ ಕಾಳಜಿ, ಸೇವಾ ಚಿಂತನೆಯಿಂದ ಯುವಶಕ್ತಿ ಸಮಾಜಮುಖಿಯಾಗುತ್ತದೆ ಎನ್ನುವುದಕ್ಕೆ ರಾಜಕೇಸರಿ ಸಂಘಟನೆ ಉತ್ತಮ ನಿದರ್ಶನ. ಇಂಥ ಸಂಘಟನಾತ್ಮಕ ಯುವಶಕ್ತಿಗೆ ಸಮಾಜದಲ್ಲಿ ಪ್ರೋತ್ಸಾಹ ಖಂಡಿತ ಲಭಿಸುವುದು ಎಂದರು.
ದರೆಗುಡ್ಡೆ ಕೆಲ್ಲಪುತ್ತಿಗೆ ವೀರಮಾರುತಿ ಕ್ರೀಡಾಂಗಣದಲ್ಲಿ ನಡೆದ ಮನೆ ಹಸ್ತಾಂತರ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಧ್ಯಕ್ಷ ಜಯಂತ್ ನಡುಬೈಲು ವಹಿಸಿದ್ದರು.
ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಮತ್ತು ಕ್ರೀಡಾರತ್ನ ಪ್ರಶಸ್ತಿ ಪುರಸ್ಕøತ ಕಂಬಳ ಓಟಗಾರ ಪ್ರವೀಣ್ ಕೋಟ್ಯಾನ್ ಪಣಪಿಲ ಅವರನ್ನು ಸನ್ಮಾನಿಸಲಾಯಿತು.
ರಾಜಕೇಸರಿ ಮೂಡುಬಿದಿರೆ ತಾ. ಅಧ್ಯಕ್ಷ ಕಿಶೋರ್, ದರೆಗುಡ್ಡೆ ನಿ.ಪೂ. ಉಪಾಧ್ಯಕ್ಷ ಮುನಿರಾಜ್ ಹೆಗ್ಡೆ, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬಿಜೆಪಿ ಜಿಲ್ಲಾ ಯುವಮೋರ್ಚಾದ ಪ್ರವೀಣ್ ನೆಟ್ಟಾರು, ಮೂಡುಬಿದಿರೆ ಪ್ರೆಸ್ಕ್ಲಬ್ ಅಧ್ಯಕ್ಷ ವೇಣುಗೋಪಾಲ್, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞ, ಎಪಿಎಂಸಿ ಸದಸ್ಯ ಅಶೋಕ್ ಶೆಟ್ಟಿ ಬೇಲೊಟ್ಟು, ಉದ್ಯಮಿ ಕುಮಾರ್ ಪೂಜಾರಿ ಇರುವೈಲು, ಹಿಂ.ಜಾ.ವೇ. ಮೂಡುಬಿದಿರೆ ತಾಲೂಕು ಅಧ್ಯಕ್ಷ ಸಮಿತ್ರಾಜ್ ದರೆಗುಡ್ಡೆ, ಗ್ರಾ.ಪಂ. ಮಾಜಿ ಸದಸ್ಯ ಜಯಕುಮಾರ್ ಶೆಟ್ಟಿ, ಆಲಡ್ಕ ಹಿಂದೂ ಯುವಶಕ್ತಿ ಅಧ್ಯಕ್ಷ ದೇವದಾಸ್ ಸಾಲ್ಯಾನ್, ರಾಜಕೇಸರಿ ಜಿಲ್ಲಾಧ್ಯಕ್ಷ ಅಶೋಕ್ ಎಸ್. ಮಾಲೆಮಾರ್, ಕಾರ್ಕಳ ಅಧ್ಯಕ್ಷ ಸಂಪತ್ ಭಂಡಾರಿ, ಬೆಳ್ತಂಗಡಿ ಅಧ್ಯಕ್ಷ ಕಾರ್ತಿಕ್, ರಾಮಸೇನೆ ತಾಲೂಕು ಅಧ್ಯಕ್ಷ ಅಶೋಕ ಆಳ್ವ ಭಾಗವಹಿಸಿದರು.
ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ರಾಮ್ಕುಮಾರ್ ಮಾರ್ನಾಡು ಮತ್ತು ಶುಭಕರ ಅಂಚನ್ ನಿರೂಪಿಸಿ, ಸಂದೀಪ್ ವಂದಿಸಿದರು.
ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಟೆಲಿಕಾನ್ಪರೆನ್ಸ್ ಮೂಲಕ ಶುಭ ಹಾರೈಸಿದ ಬೆಂಗಳೂರು ಎಸ್ಪಿ ರವಿ ಡಿ. ಚೆನ್ನಣ್ಣನವರ್ ಅವರು `ಬಡ ಕುಟುಂಬದಿಂದ ಬಂದ ತಾನು ಕೂಲಿ ಕಾರ್ಮಿಕರು ಒಂದಾಗಿ ಅಶಕ್ತರಿಗೆ ನೆರವಾಗುತ್ತಿರುವ `ರಾಜಕೇಸರಿ’ ಸಂಘಟನೆಯಿಂದ ಪ್ರಭಾವಿತನಾಗಿದ್ದೇನೆ. ನಾಡು ಕಟ್ಟುವ ಇಚ್ಛಾಶಕ್ತಿ ಇಲ್ಲಿ ಕಾಣುತ್ತಿದೆ. ರಾಜಕೇಸರಿಯ 33ನೇ ಮನೆಯನ್ನು ತಾನು ಪೂರ್ಣ ಪ್ರಾಯೋಜಿಸುತ್ತೇನೆ ಎಂದು ಘೋಷಿಸಿದರು.
