ಬಂಟ್ವಾಳ: ಕರ್ನಾಟಕ ಕುಂಬಾರರ ಯುವ ಸೈನ್ಯ ಬೆಂಗಳೂರು ಇದರ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯ ಸಿಂಧಿಗೇರಿ ಗ್ರಾಮದಲ್ಲಿ ಕಳೆದ ನ.೧೨ರಂದು ಚಾಲನೆ ಪಡೆದುಕೊಂಡ ಕುಂಬಾರ ಸಂಕಲ್ಪ ಯಾತ್ರೆಯು ಗುರುವಾರ ಬಂಟ್ವಾಳ ತಲುಪಿದ್ದು ಬಿ.ಸಿ.ರೋಡಿನ ಪೊಸಳ್ಳಿಯ ಕುಲಾಲ ಸಭಾಭವನದ ಬಳಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಹಾಗೂ ಕುಲಾಲ ಹಿರಿಯ ನಾಗರಿಕರ ಸಂಘ ಇದರ ವತಿಯಿಂದ ಸ್ವಾಗತಿಸಲಾಯಿತು .
ಬಳಿಕ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಸಂಕಲ್ಪ ಯಾತ್ರೆಯ ರುವಾರಿ, ಕರ್ನಾಟಕ ಕುಂಬಾರರ ಯುವ ಸೈನ್ಯದ ಸ್ಥಾಪಕಾಧ್ಯಕ್ಷ ಶಂಕರ ಶೆಟ್ಟಿ ಕುಂಬಾರ ಮಾತನಾಡಿ ಸಾಮಾಜಿಕ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಕುಲಾಲ ಸಮುದಾಯದ ಬಂಧುಗಳನ್ನು ಒಗ್ಗೂಡಿಸಿ ಸ್ಪರ್ಧಾತ್ಮಕ ಬೆಳವಣಿಗೆಗೆ ಹೊಂದಲು ಜನಜಾಗೃತಿ ಮೂಡಿಸುವುದು, ಕುಂಬಾರ ಸಮಾಜಕ್ಕೆ ಸರ್ಕಾರಿ ಸವಲತ್ತುಗಳನ್ನು ಪಡೆಯಲು ವಿಶೇಷ ಒಳ ಮೀಸಲಾತಿಗೆ ಒತ್ತಾಯಿಸುವುದು, ಕುಂಬಾರಿಕೆ ಕಲೆಗೆ ಮರು ಜೀವ ನೀಡಿ ಕುಂಬಾರರು ತಯಾರಿಸುವ ಮಡಿಕೆಗಳನ್ನು ಸರಕಾರವೇ ಖರೀದಿಸುವುದು ಮತ್ತು ಸರಕಾರವೇ ಮಡಿಕೆ ಮಾರಾಟ ಕೇಂದ್ರಗಳನ್ನು ತೆರೆದು ಕುಂಬಾರಿಕೆ ವೃತ್ತಿ ಅವಲಂಬಿಸಿರುವವರಿಗೆ ಸಹಾಯ ಹಸ್ತ ನೀಡುವುದು, ಕುಂಬಾರರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಮೊದಲಾದ ಪ್ರಮುಖ ಉದ್ದೇಶಗಳನ್ನು ಇಟ್ಟುಕೊಂಡು ಸಂಕಲ್ಪ ಯಾತ್ರೆಯ ಮೂಲಕ ಕುಲಾಲ ಬಂಧುಗಳನ್ನು ಸಂಘಟಿಸುತ್ತಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷೆ ಜಯಂತಿ ಗಂಗಾಧರ, ಕರಾವಳಿ ಕುಲಾಲ ಕುಂಬಾರರ ಯುವವೇದಿಕೆಯ ಅಧ್ಯಕ್ಷ ಸತೀಶ್ ಕುಲಾಲ್ ಜಕ್ರಿಬೆಟ್ಟು, ಸಂಘಟನೆಯ ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್, ಡೊಂಬಯ ಕುಲಾಲ್, ಸುಕುಮಾರ್ ಬಂಟ್ವಾಳ್, ನಾರಾಯಣ ಸಿ ಪೆರ್ನೆ ಪುರುಷೋತ್ತಮ, ಹರಿಪ್ರಸಾದ್, ಕಾರ್ತಿಕ್ ಮಯ್ಯರಬೈಲು, ಸೋಮನಾಥ್, ಜಲಜಾಕ್ಷಿ ಕುಲಾಲ್, ಮುಡಿಪು ಕುಲಾಲ ಸಂಘದ ಸದಸ್ಯ ಸುಂದರ್ ಮುಡಿಪು, ಉಳ್ಳಾಲ ಕುಲಾಲ ಸಂಘದ ಸದಸ್ಯ ನವೀನ್ ಕುಲಾಲ್ ಪೆದಮಲೆ, ನಿತೇಶ್ ಮೊದಲಾದವರು ಉಪಸ್ಥಿತರಿದ್ದರು. ಲಕ್ಷ್ಮಣ ಕುಲಾಲ್ ಅಗ್ರಬೈಲು ಸ್ವಾಗತಿಸಿದರು. ಕೇಶವ ಮಾಸ್ತರ್ ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
