ಬಂಟ್ವಾಳ : ಕಲ್ಲಡ್ಕ ಸಮೀಪದ ಕರಿಂಗಾನ-ಅಮ್ಟೂರು ಮಸೀದಿ ಬಳಿಯ ಮನೆಯೊಂದರ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವುಗೈದು ಪರಾರಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಇಲ್ಲಿನ ಸುಲೈಮಾನ್ ಅವರ ಮನೆಯಲ್ಲಿ ಈ ಕಳವುಕೃತ್ಯ ನಡೆದಿದೆ. ಇವರ ವಿವಾಹಿತ ಪುತ್ರಿ ತವರು ಮನೆಗೆ ಬರುವಾಗ ತನ್ನಲ್ಲಿದ್ದ ಚಿನ್ನಾಭರಣ ಧರಿಸಿಕೊಂಡು ಬಂದು, ಮನೆಯ ಕೋಣೆಯ ಕಪಾಟಿನಲ್ಲಿದ್ದರು. ಮಂಗಳವಾರ ನಡುರಾತ್ರಿ ವೇಳೆಗೆ ಮನೆಯ ಹಿಂಬಾಗಿಲ ಚಿಲಕ ಮುರಿದು ಒಳಹೊಕ್ಕಿದ ಕಳ್ಳರು ಕಪಾಟಿನಲ್ಲಿಟ್ಟಿದ್ದ 28 ಪವನ್ ಚಿನ್ನಾಭರಣ ಸಹಿತ ಸುಮಾರು 600 ರೂಪಾಯಿ ನಗದು ಹಣವನ್ನ ಕಳವುಗೈದು ಪರಾರಿಯಾಗಿದ್ದಾರೆ.
ನುಸುಕಿನಜಾವ 2 ಗಂಟೆಯ ವೇಳೆಗೆ ಮನೆ ಮಂದಿ ಎಚ್ಚರಗೊಂಡು ನೋಡಿದಾಗ ಮನೆಯ ಹಿಂಬಾಗಿಲು ಹಾಗೂ ಕಪಾಟಿನ ಬಾಗಿಲು ತೆರೆದಿರುವುದು ಕಂಡು ಬಂದು ಪ್ರಕರಣ ಬೆಳಕಿಗೆ ಬಂದಿದೆ.ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.
ಬಂಟ್ವಾಳ ನಗರ ಠಾಣಾ ಎಸ್ಸೈ ಅವಿನಾಶ್ಮತ್ತವರ ಸಿಬ್ಬಂದಿಗಳು ಮತ್ತು ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳವಾದ ಚಿನ್ನಾಭರಣದ ಮೌಲ್ಯ 12 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಲಾಗಿದ್ದು ತನಿಖೆ ಮುಂದುವರೆದಿದೆ.
