ಬಂಟ್ವಾಳ: ವಿದ್ಯುತ್ ಬಿಲ್ ಪಾವತಿಯಲ್ಲಿ ಮೆಸ್ಕಾಂ ಇಲಾಖೆ ಗ್ರಾಹಕರಿಂದ ಅಧಿಕ ಮೊತ್ತದ ಬಿಲ್ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿ ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ನಿಯೋಗ ಮೆಸ್ಕಾಂ ಕಾರ್ಯನಿರ್ವಾಕಾಧಿಕಾರಿಯನ್ನು ಭೇಟಿಯಾಗಿ ಸಮಸ್ಯೆಯನ್ನು ಇತ್ಯರ್ಥಪಡಿಸಲು ಒತ್ತಾಯಿಸಿತು. 

ಕೊರೊನಾ ಲಾಕ್ ಡೌನ್ ನಿಂದಾಗಿ ಆರ್ಥಿಕವಾಗಿ ಕಂಗೆಟ್ಟ ಜನರಿಗೆ ಗುತ್ತಿಗೆದಾರರ ಮತ್ತು ಇಲಾಖೆಯ ಮದ್ಯೆ ಹೊಂದಾಣಿಕೆ ಸಮಸ್ಯೆಯಿಂದಾಗಿ ಮೀಟರ್ ರೀಡರ್ಗಳು ಮನೆಗೆ ಬಾರದೇ ಇದೀಗ ಇಲಾಖೆ ಕನಿಷ್ಠ ಬಿಲ್ ಪಾವತಿಸುವ ವಿಧಾನ ಜ್ಯಾರಿಯಲ್ಲಿದ್ದರೂ ಕೂಡಾ ಸರಾಸರಿ ಮೂರು ತಿಂಗಳಿಗೆ ಒಂದು ಸಾವಿರ ಬಿಲ್ ಪಾವತಿಸಬೇಕಾದ ಗ್ರಾಹಕರಿಗೆ ೧೮ ಸಾವಿರ ಬಿಲ್ ನೀಡಿರುವುದು ಗ್ರಾಹಕರಿಗೆ ಆಘಾತವನ್ನುಂಟು ಮಾಡುವಂತಾಗಿದೆ ಎಂದು ನಿಯೋಗ ಮೆಸ್ಕಾಂ ಅಧಿಕಾರಿಯ ಗಮನಸೆಳೆಯಿತು. ಪ್ರಸ್ತುತ ಮೀಟರ್ ರೀಡರ್ ಗಳು ಹಲವು ತಿಂಗಳುಗಳಿಂದ ಅವರ ಬೇಡಿಕೆಗಳನ್ನು ಮುಂದಿಟ್ಟು ಮೀಟರ್ ರೀಡಿಂಗ್ ಮಾಡಿ ಬಿಲ್ ನೀಡುವ ಕೆಲಸವನ್ನು ಸ್ಥಗಿತಗೊಳಿಸಿರುವುದರಿಂದ ಈ ಎಡವಟ್ಟುಗಳಿಗೆ ಕಾರಣ ಎಂದು ನಿಯೋಗ ಆರೋಪಿಸಿತು.
ಅಧಿಕ ಮೊತ್ತದ ಬಿಲ್ ಗಳನ್ನು ನೀಡಿರುವ ಗ್ರಾಹಕರಿಗೆ ಪುನರ್ ಪರಿಶೀಲಿಸಿ ಅವರು ಬಳಕೆ ಮಾಡಿದ ವಿದ್ಯುತ್ ಯೂನಿಟ್ ಗಳಿಗೆ ಅನುಸಾರವಾಗಿ ಅಥವಾ ಈ ಹಿಂದೆ ಅವರು ಉಪಯೋಗಿಸಿದ ಯೂನಿಟ್ ಗಳ ಸರಾಸರಿ ಮೊತ್ತವನ್ನು ಪರಿಗಣಿಸಿ ಜನಸಾಮಾನ್ಯರಿಗೆ ಹೊರೆಯಾಗದಂತೆ ಸೂಕ್ತ ಬಿಲ್ ನೀಡಿ ಸಮಸ್ಯೆಯನ್ನು ಬಗೆಹರಿಸುವಂತೆ ಮೆಸ್ಕಾಂ ನ ಬಂಟ್ವಾಳ ವಿಭಾಗದ ಕಾರ್ಯ ನಿರ್ವಾಹಕ ಅಧಿಕಾರಿಯವರನ್ನು ಒತ್ತಾಯಿಸಿತು.
ಈ ಸಮಸ್ಯೆ ಬಗೆಹರಿಯದಿದ್ದಲ್ಲಿ ಸಮಾನ ಮನಸ್ಕ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕಾದೀತು ಎಂದು ಸಂಘಟನೆಯ ಮುಖಂಡರು ಎಚ್ಚರಿಸಿದ್ದಾರೆ.ನಿಯೋಗದಲ್ಲಿ ಸಮಿತಿಯ ಅಧ್ಯಕ್ಷ ಬಿ.ಎಂ ಪ್ರಭಾಕರ ದೈವಗುಡ್ಡೆ, ಪ್ರಧಾನ ಕಾರ್ಯದರ್ಶಿ ಬಿ.ಶೇಖರ್, ಪದಾಧಿಕಾರಿಗಳಾದ ಪ್ರಕಾಶ್ ಶೆಟ್ಟಿ ತುಂಬೆ, ಹಾರುನ್ ರಶೀದ್, ಸಹಕರ್ಯದರ್ಶಿಗಳಾದ ಸುರೇಶ್ ಕುಮಾರ್ ಬಂಟ್ವಾಳ್, ರಾಮಣ್ಣ ವಿಟ್ಲ ಸುರೇಂದ್ರ ಕೋಟ್ಯಾನ್, ಭಾರತಿ ಪ್ರಶಾಂತ್, ಸರಸ್ವತಿ, ಶರೀಫ್ ಮದ್ವ, ಇಸ್ಮಾಯಿಲ್ ಅರಬಿ, ಇಬ್ರಾಹಿಂ ನಾವೂರು, ಹರೀಶ್ ಅಜ್ಜಿಬೆಟ್ಟು, ಸತೀಶ್ ಕುಮಾರ್ ಬಿಸಿರೋಡು, ಮೊದಲಾದವರು ಉಪಸ್ಥಿತರಿದ್ದರು.
