ಮೂಡುಬಿದರೆ: ಕಳೆದ ಸೆ 19ರಂದು ಕಡಲಕೆರೆ ನಿಸರ್ಗದಾಮದ ಬಳಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದ ಮಾನವ ದೇಹದ ತಲೆಬುರುಡೆ, ಎದೆಗೂಡು ಸೇರಿದಂತೆ ಮಾನವ ಅಸ್ಥಿ ಪಂಜರ ಯಾರದ್ದು ಎನ್ನುವ ಪ್ರಶ್ನೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಪುರಸಭಾ ವ್ಯಾಪ್ತಿಗೆ ಒಳಪಡುವ ಕಡಲಕೆರೆ ಸಮೀಪದ ನಡುತೋಪಿಗೆ ಸ್ಥಳೀಯ ಮಹಿಳೆಯೋರ್ವರು ಸಂಜೆ ಕಟ್ಟಿಗೆ ತರಲೆಂದು ಹೋದಾಗ ತಲೆಬುರುಡೆ, ಎದೆಗೂಡು ಸೇರಿದಂತೆ ಮಾನವ ಅಸ್ಥಿ ಪಂಜರ ಪತ್ತೆಯಾಗಿತ್ತು. ಹೆದರಿದ ಮಹಿಳೆ ಸ್ಥಳೀಯ ಪುರಸಭಾ ಸದಸ್ಯ ನಾಗರಾಜ ಪೂಜಾರಿಯವರಿಗೆ ನೀಡಿದ ಮಾಹಿತಿಯಂತೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ತಲೆಬುರುಡೆ ಜೊತೆ ಪತ್ತೆಯಾದ ಎದೆಗೂಡು ತುಂಡು ತುಂಡಾಗಿದ್ದು, ಮೂಳೆಗಳು ಸುತ್ತಲಿನ ಪ್ರದೇಶದಲ್ಲಿ ಚದುರಿಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
ಅಸ್ಥಿ ಪಂಜರದ ಸಮೀಪ ಸುಮಾರು ಹತ್ತು ಅಡಿ ಎತ್ತರದ ಅಕೇಶಿಯ ಮರದ ಕೊಂಬೆಯೊಂದು ಮುರಿದಿದ್ದು, ಇದಕ್ಕೆ ನೈಲಾನ್ ಹಗ್ಗ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವ ಸುಳಿವುಗಳು ಲಭಿಸಿವೆ.ಸುಮಾರು 30 ರಿಂದ 35 ವರ್ಷದ ಗಂಡಸು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ಅಂದಾಜಿಸಲಾಗಿದೆ.ಮೃತ ವ್ಯಕ್ತಿಯ ಚಪ್ಪಲಿ, ಅಂಗಿ, ಪ್ಯಾಂಟ್ಗಳು ಕೂಡ ಸಮೀಪದಲ್ಲಿದ್ದವು.


ಘಟನಾ ಸ್ಥಳಕ್ಕೆ ಮೂಡಬಿದರೆ ಪೊಲೀಸರು ಮಂಗಳೂರಿನ ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದಾಗ ಅಸ್ಥಿಪಂಜರದ ವ್ಯಕ್ತಿ ಮೂರು ತಿಂಗಳ ಹಿಂದೆ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಿ.ಎಸ್.ಐ ರಮೇಶ್ ಕುಮಾರ್ ತನಿಖೆ ಆರಂಭಿಸಿದ್ದರು.
ಸುಳಿವಿಲ್ಲ…
ಈ ಪ್ರಕರಣದಲ್ಲಿ ಅಸ್ತಿ ಪಂಜರ ಯಾರದ್ದು? ಸತ್ತವರು ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪೊಲೀಸರು ಹೆಚ್ಚಿನ ಠಾಣೆಗಳಿಗೆ ಮಾಹಿತಿ ರವಾನಿಸಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಬೆಂಗಳೂರಿನ ಪ್ರಯೋಗಾಲಯಕ್ಕೆ ಎಲುಬು, ತಲೆಬುರುಡೆಯ ಬಗ್ಗೆ ಡಿ.ಎನ್.ಎ ವರದಿ ಇನ್ನೂ ಪೋಲೀಸರ ಕೈ ಸೇರಿಲ್ಲ. ಮಂಗಳೂರಿನ ಅಸ್ಪತ್ರೆಯಿಂದ ಎಲುಬುಗಳ ಬಗ್ಗೆಯೂ ವಿವರ ಕಲೆ ಹಾಕಲಾಗುತ್ತಿದೆ. ಸ್ಥಳದಲ್ಲಿ ಸಿಕ್ಕಿದ ಸೊತ್ತುಗಳ ಆಧಾರದಲ್ಲಿ ಯಾವುದೇ ಮಾಹಿತಿ ದೊರೆಯಬಹುದೇ ಎನ್ನುವುದು ಪೋಲೀಸ್ ಇಲಾಖೆಯ ನಿರೀಕ್ಷೆಯಾಗಿದೆ.
ಅಂದು ಸ್ಥಳದಲ್ಲಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಎಎಸ್4 ಎಂದಿದ್ದು ಕಪ್ಪು ಲೆದರ್ ಬೆಲ್ಟ್, ಕಪ್ಪು ಚೌಕುಳಿಯ ನೀಲಿಯ ಉದ್ದಕೈ ಅಂಗಿ, ಲೂನಾರ್ಸ್ 9ಸೈಜಿನ ಬೆಲ್ಟಿನ ಕಪ್ಪು ವರ್ಣದ ಎರಡು ಚಪ್ಪಲಿಗಳು ದೊರೆತಿದ್ದು ಮೃತಪಟ್ಟವರ ಪತ್ತೆಗೆ ಮಾಹಿತಿ ಇದ್ದಲ್ಲಿ ನೀಡಿ ಸಹಕರಿಸುವಂತೆ ಅಥವಾ 9480805357 ಸಂಪಕರ್ಿಸುವಂತೆ ಪೋಲೀಸ್ ಮೂಲಗಳು ವಿನಂತಿಸಿವೆ.

