ಬಂಟ್ವಾಳ: ಕೋವಿಡ್ ಆತಂಕದ ರವಿವಾರದ ಸಂಪೂರ್ಣ ಲಾಕ್ ಡೌನ್ ಗೆ ಬಂಟ್ವಾಳ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದೆ. ತಾಲೂಕು ಕೇಂದ್ರ ಬಿ.ಸಿ.ರೋಡು,ಬಂಟ್ವಾಳ ಪೇಟೆ ಸೇರಿದಂತೆ ಗ್ರಾಮೀಣ ಪ್ರದೇಶಗಳು ಕೂಡ ಸ್ತಬ್ಧವಾಗಿದೆ.
ಲಾಕ್ ಡೌನ್ ಸಡಿಲಿಕೆಯ ಬಳಿಕ ಚಟುವಟಿಕೆಯಿಂದ ಕೂಡಿದ್ದ ಬಂಟ್ವಾಳ,ಬಿ.ಸಿ.ರೋಡು,ಮೆಲ್ಕಾರ್,ಕಲ್ಲಡ್ಕ ನಗರ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವಾಹನ ಸಂಚಾರವೂ ಇರಲಿಲ್ಲ. ಬೆಳಗ್ಗೆಯಿಂದಲೇ ಎಲ್ಲಾ ಪ್ರದೇಶವೂ ಬಿಕೋ ಎನ್ನುತ್ತಿತ್ತು.ಜನರು ಕೂಡ ಯಾರು ರಸ್ತೆಗೆ ಇಳಿಯಲಿಲ್ಲ,ಬಂಟ್ವಾಳದಲ್ಲಿ ಬೆಳಗ್ಗಿನ ಹೊತ್ತು ಒಂದಷ್ಟು ಹೊತ್ತು ಮಾಂಸದಂಗಡಿಗಳು,ತರಕಾರಿ ಅಂಗಡಿ ತೆರೆದಿದ್ದು, ಎಂಟುಗಂಟೆಯ ಬಳಿಕ ಈ ಅಂಗಡಿಗಳು ಮುಚ್ಚಿದವು.ಅನಗತ್ಯವಾಗಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಸವಾರರಿಗೆ ಕರ್ತವ್ಯದಲ್ಲಿದ್ದ ಪೊಲೀಸರು ತಡೆದು ನಿಲ್ಲಿಸಿ ಎಚ್ಚರಿಕೆ ನೀಡಿದ ದೃಶ್ಯ ಬಂಟ್ವಾಳದಲ್ಲಿ ಕಂಡು ಬಂದಿತ್ತು. ಲಾಕ್ ಡೌನ್ ಹಿನ್ನಲೆಯಲ್ಲಿ ಬಿ.ಸಿ.ರೋಡಿನ ಬಸ್ ತಂಗುದಾಣದಲ್ಲಿದ್ದ 6 ಮಂದಿ ಅನಾಥರಿಗೆ
ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಇಕ್ಬಾಲ್ ಆಹಾರದ ಪೊಟ್ಟಣ ವಿತರಿಸಿದರಲ್ಲದೆ ಬೀದಿ ನಾಯಿಗಳಿಗೂ ಬಿಸ್ಕಿಟ್ ಕೊಟ್ಟು ಅದರ ಹಸಿವನ್ನು ನೀಗಿಸಿದರು.