ಬಂಟ್ವಾಳ: ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ವಾಷಿ೯ಕ ಪರೀಕ್ಷೆಯು ಗುರುವಾರ ಮೊದಲದಿನ ಸುಸೂತ್ರವಾಗಿ ನಡೆದಿದೆ.ತಾಲೂಕಿನಲ್ಲಿ 5050 ಮಂದಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 4861 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು189 ಮಂದಿ ಗೈರು ಹಾಜರಾಗಿದ್ದಾರೆ. ಪರೀಕ್ಷಗೆ ಗೈರು ಹಾಜರಾದ ಒಟ್ಟು 189 ಮಂದಿಗಳ ಪೈಕಿ 117 ಮಂದಿ ವಲಸೆ ವಿದ್ಯಾರ್ಥಿಗಳು.
ಇವರಿಗೆ ಆಯಾಯ ಊರಿನಲ್ಲೇ ಪರೀಕ್ಷೆ ಬರೆಯಲು ಸರ್ಕಾರ ಅವಕಾಶ ನೀಡಿತ್ತು. ತಾಲೂಕಿನಲ್ಲಿ 19 ಪರೀಕ್ಷಾ ಕೇಂದ್ರ ಮೀಸಲಿಡಲಾಗಿತ್ತು.ಆದರೆ17 ಕೇಂದ್ರದಲ್ಲಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ, ಥರ್ಮಲ್ ಸ್ಕ್ರೀನಿಂಗ್ ಸಹಿತ ಮುನ್ನಚ್ಚರಿಕಾ ಕ್ರಮವಾಗಿ ಎಲ್ಲಾ ರೀತಿ ತಪಾಸಣೆ ನಡೆಸಿದ ಬಳಿಕವೇ ವಿದ್ತಾರ್ಥಿಗಳನ್ನು ಸಾಲಾಗಿ ಪರೀಕ್ಷಾ ಕೇಂದ್ರದೊಳಗೆ ಕಳುಹಿಸಿಕೊಡಲಾಗಿತ್ತು. ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯೊಬ್ಬರು ವಾಂತಿ ಮಾಡಿಕೊಂಡ ಪರಿಣಾಮ ತಕ್ಷಣವೇ ಸ್ಥಳೀಯ ವೈದ್ಯಾಧಿಕಾರಿ ಬಂದು ಆರೋಗ್ಯ ತಪಾಸಣೆ ನಡೆಸಿ ಔಷಧಿ ನೀಡಿದ ಬಳಿಕ ಆಕೆ ಉತ್ಸಾಹದಿಂದ ಪರೀಕ್ಷೆ ಬರೆದಿದ್ದಾರೆ.
ಬಹುತೇಕ ಕಡೆಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡುವಂತೆ ಶಿಕ್ಷಕಿಯರು ಎಚ್ಚರಿಸುತ್ತಿದ್ದ ದೃಶ್ಯವೂ ಕಂಡು ಬಂದಿದೆ. ಉಳಿದಂತೆ ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಗೊಂದಲವಿಲ್ಲದೆ ಮೊದಲದಿನದ ಪರೀಕ್ಷೆ ಮುಕ್ತಾಯಗೊಂಡಿದೆ. ಕೆಲ ವಿದ್ಯಾರ್ಥಿಗಳನ್ನು ಹೆತ್ತವರು ತಮ್ಮ ಸ್ವಂತ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತಂದರೆ ಕೆಲವರು ಶಿಕ್ಷಣ ಇಲಾಖೆ ನಿಗದಿಪಡಿಸಿದ ಬಸ್ ಗಳಲ್ಲಿ ಇನ್ನು ಕೆಲವರು ಕಾಲ್ನಡಿಗೆಯಲ್ಲಿ ಅಗಮಿಸಿ ವಾಪಾಸ್ ಹಾಗೆಯೇ ತೆರಳಿದರು. 
ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಶಾಸಕರು :
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಎಸ್ ವಿ ಎಸ್ ದೇವಳ ಅಂಗ್ಲ ಮಾಧ್ಯಮ ಶಾಲಾ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕಾ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರಲ್ಲದೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಶುಭಹಾರೈಸಿದರು. ಉತ್ತಮ ವ್ಯವಸ್ಥೆ ಕಲ್ಪಿಸಿದ ಶಿಕ್ಷಣ ಇಲಾಖಾಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ,ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.ಹಾಗೆಯೇ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸಹಿತ ಕೆಲ ಪರೀಕ್ಷಾ ಕೇಂದ್ರಗಳಿಗೆ ತಹಶೀಲ್ದಾರ್ ರಶ್ಮೀ ಎಸ್.ಆರ್ ಅವರು ಭೇಟಿ ನೀಡಿ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು.
