ಶ್ರೀನಿವಾಸಪುರ: ಕೋಲಾರ ಜಿಲ್ಲೆಯಲ್ಲಿ 60,433 ಹೆಕ್ಟೇರ್ ವಿಸ್ತೀರ್ಣದಲ್ಲಿ ಮಾವು ಬೆಳೆಯಲಾಗಿದೆ. ಆ ಪೈಕಿ ಶ್ರೀನಿವಾಸಪುರ ತಾಲ್ಲೂಕಿನದ್ದೇ ಸಿಂಹಪಾಲು. ಇಲ್ಲಿ ಬಾದಾಮಿ, ಬೇನಿಷಾ, ಮಲ್ಲಿಕಾ, ತೋತಾಪುರಿ, ನೀಲಂ, ರಾಜಗೀರಾ ಸೇರಿದಂತೆ ಹಲವು ತಳಿಯ ಮಾವಿನ ಪ್ರಸಿದ್ಧ ಮತ್ತು ರುಚಿಗೆ ಹೆಸರು.ಈ ಬಾರಿ ಮಾವಿನ ಕಾಯಿಗೆ ಒಳ್ಳೆ ಬೆಲೆ ಬಂದಿದೆ. ಇದು ಮಾವು ಬೆಳೆಗಾರರ ಸಂತೋಷಕ್ಕೆ ಕಾರಣವಾಗಿದೆ. ಬಲಿತ ಕಾಯಿಗಳನ್ನು ಕೊಯ್ಲುಮಾಡಿ ತಂದು ಮಾರುಕಟ್ಟೆಯಲ್ಲಿ ರಾಶಿ ಹಾಕುತ್ತಿದ್ದಾರೆ.

‘ರಸ ತಯಾರಿಸಲು ಬಳಸುವ ತೊತಾಪುರಿ ಮಾವು ಆರಂಭದಲ್ಲಿಯೇ ದಾಖಲೆ ಬೆಲೆಗೆ ಮಾರಾಟವಾಗುತ್ತಿದೆ. ರಸ ತಯಾರಿಕೆಗೆ ಹೋಗುವ ತೊತಾಪುರಿ ಮಾವು ಕಾಯಿ ಟನ್ಗೆ .20 ಸಾವಿರದಂತೆ ಮಾರಾಟ ವಾಗುತ್ತಿದೆ. ಕಳೆದ ವರ್ಷ .18 ಸಾವಿರದ ವರೆಗೆ ಮಾತ್ರ ಬೆಲೆ ಸಿಕ್ಕಿತ್ತು. ಬಣ್ಣದ ತೊತಾಪುರಿ ಮಾವು ಕಾಯಿಯನ್ನು ತಿನ್ನಲು ಖರೀದಿಸಲಾಗುತ್ತದೆ. ಅಂಥ ಕಾಯಿಯ ಬೆಲೆ ಟನ್ಗೆ . 25 ಸಾವಿರದಂತೆ ಖರೀದಿಯಾಗುತ್ತಿದೆ.
ಉಳಿದಂತ ಬಾದಾಮಿ ಬೆಲೆ ಟನ್ಗೆ . 40 – 50 ಸಾವಿರ , ಲಾಲ್ ಬಾಗ್ (ರಾಜಗೀರಾ) ಮಾವು ಟನ್ ಗೆ . 22-27 ಸಾವಿರ , ಮಲ್ಲಿಕಾ ಕಾಯಿಯ ಬೆಲೆ ಟನ್ಗೆ . 30-50 ಸಾವಿರ ,
ಬೇನಿಷಾ ಕಾಯಿಯ ಬೆಲೆ ಟನ್ಗೆ . 30-40 ಸಾವಿರ ,ಮಾಲ್ಗೋಬಾ ಕಾಯಿಯ ಬೆಲೆ ಟನ್ಗೆ . 25-50 ಸಾವಿರ , ಶೇಕರ್ ಬೀಜ್ ಕಾಯಿಯ ಬೆಲೆ. 30-45 ಸಾವಿರ , ಕಲಾ ಪಹಡಾ ಕಾಯಿಯ ಬೆಲೆ ಟನ್ಗೆ . 20-35 ಸಾವಿರ , ರಾಸ್ ಪುರಿ ಕಾಯಿಯ ಬೆಲೆ ಟನ್ಗೆ .20-30 ಸಾವಿರ, ಇಮಾಮ್ ಪಸಂದ್ ಕಾಯಿಯ ಬೆಲೆ ಟನ್ಗೆ . 50 – 65 ಸಾವಿರ, ತಳಿಯ ಮಾವಿನ ಕಾಯಿ ಟನ್ಗೆ ಮಾರಾಟವಾಗುತ್ತಿದೆ’ ಎಂದು ರಫಿ ಮಾವು ಕಂಪನಿ ಮಾಲೀಕರು ಸೈಯದ್ ಫೈಜ್ ಅಹಮ್ಮದ್ ಪತ್ರಿಕೆ ಗೆ ತಿಳಿಸಿದರು.
ಕೊರೊನಾ ಸೋಂಕು ಹರಡುವ ಆತಂಕದಿಂದಾಗಿ ಹೆಚ್ಚಿನ ಸಂಖ್ಯೆಯ ಮಾವು ಬೆಳೆಗಾರರು ಎಳೆ ಕಾಯಿ ಕಿತ್ತು ಮಾರುಕಟ್ಟೆಗೆ ಹಾಕಿದ್ದಾರೆ. ಇದರಿಂದಾಗಿ ದಿನ ಕಳೆದಂತೆ ಮಾರುಕಟ್ಟೆಗೆ ಮಾವಿನ ಆವಕದ ಪ್ರಮಾಣ ಕಡಿಮೆಯಾಗುತ್ತಿದೆ. ರೈತರು ಮಾರುಕಟ್ಟೆಗೆ ಕಾಯಿ ಹಾಕುವ ಬದಲಿಗೆ, ಫಸಲನ್ನು ತೋಟಗಳ ಮೇಲೆ ಮಾರಿ ಕೈತೊಳೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಕೊಯ್ಲು ಮಾಡಿದ ಮಾವನ್ನು ತೊಟಗಳಲ್ಲಿಯೇ ಮಾರುತ್ತಿದ್ದಾರೆ.
‘ತೋಟದ ಬಳಿ ಕಾಯಿ ಮಾರಾಟ ಮಾಡುವುದರಿಂದ ಸಾಗಾಣಿಕೆ ವೆಚ್ಚ ಬರುವುದಿಲ್ಲ’ ಎಂದು ಮಾವು ಬೆಳೆಗಾರ ಬುರಕಾಯಲಕೋಟೆ ಬಿ.ಎ.ಫಾರೂಕ್ ತಿಳಿಸಿದರು.
ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿರುವುದರಿಂದ, ಕೆಲವು ರೈತರು ತೋಟಗಳಲ್ಲಿ ಫಸಲನ್ನು ಮಾರುತ್ತಿದ್ದಾರೆ.
‘ಆನ್ಲೈನ್ ಮಾರಾಟ ಗರಿಗೆದರಿದೆ. ಬೆಂಗಳೂರಿನ ಹಲವು ಕಡೆಗಳಲ್ಲಿ ಮಾವು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಮಾವಿನ ಮಾರಾಟ ಹೆಚ್ಚಿದೆ. ನಿರೀಕ್ಷೆಗೆ ಮೀರಿದ ಬೆಲೆಯೂ ಸಿಗುತ್ತಿದೆ’ ಎಂಬುದು ಮಾವು ಬೆಳೆಗಾರರ ಅಭಿಪ್ರಾಯ.
