ಗುರುಪುರ : ಲಾಕ್ಡೌನ್ನಿಂದಾಗಿ ದೇಶದ ವ್ಯವಹಾರ ಸ್ತಬ್ಧಗೊಂಡಿರುವುದರಿಂದ ಮಧ್ಯಮ ವರ್ಗ ಮತ್ತು ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಇದನ್ನರಿತ ರಾಜ್ಯ ಸರ್ಕಾರ ಮೂರು ತಿಂಗಳ ಮೆಸ್ಕಾಂ ಬಿಲ್ ಪಾವತಿಯಲ್ಲಿ ವಿನಾಯತಿ ನೀಡಿದ್ದರೂ, ಮೆಸ್ಕಾಂ ಮಾತ್ರ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಆರೋಪಿಸಿರುವ ಗುರುಪುರ ಗ್ರಾಮ ಪಂಚಾಯತ್ ಆಡಳಿತವು ಗುರುಪುರ ಕೈಕಂಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿಯೊಂದು ನೀಡಿ, ಮುಂದಿನ 10 ದಿನದೊಳಗೆ ಅಸಮರ್ಪಕ ವಿದ್ಯುತ್ ಬಿಲ್ ಸರಿಪಡಿಸಬೇಕು. ತಪ್ಪಿದಲ್ಲಿ ಮೆಸ್ಕಾಂ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಂದು ಎಚ್ಚರಿಸಿದೆ.
ಪ್ರತಿ ತಿಂಗಳು ಕನಿಷ್ಠ ಮಾಪನಕ್ಕೆ ಒಂದು ದರ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆಗೆ ಮೆಸ್ಕಾಂ ಇಲಾಖೆ ವಿಧಿಸಿರುವ ದರ ವಿಧಿಸುವುದು ಸರಿ. ಆದರೆ ಮೂರು ತಿಂಗಳಿಗೆ ಒಂದೇ ರೀತಿಯ ದರ ವಿಧಿಸಿರುವುದು ಅನ್ಯಾಯದ ಪರಮಾವಧಿ. ಆದ್ದರಿಂದ, ತಕ್ಷಣ ವಿದ್ಯುತ್ ಬಿಲ್ ವ್ಯತ್ಯಯ ಸರಿಪಡಿಸಬೇಕು ಎಂದು ಗುರುಪುರ ಗ್ರಾಪಂ ಆಗ್ರಹಿಸಿದೆ.
