ಬಂಟ್ವಾಳ: ಇಲ್ಲಿನ ಪುರಸಭೆಯ ಪರಿಸರ ಎಂಜಿನಿಯರ್ ಬುಧವಾರ ಅಸುರಕ್ಷಿತವಾಗಿ ಪೌರಕಾರ್ಮಿಕರ ಜ್ವರ ತಪಾಸಣೆ ಮಾಡಿರುವುದು ಪೌರಕಾರ್ಮಿಕರಲ್ಲಿ ಆತಂಕ ಉಂಟು ಮಾಡಿದೆಯಲ್ಲದೆ ವಿವಾದಕ್ಕು ಕಾರಣವಾಗಿದೆ.

ಇತ್ತೀಚೆಗಷ್ಟೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸೂಚನೆಯಂತೆ ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಮುಖಾಂತರ ಪುರಸಭೆಯ ಎಲ್ಲಾ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಇದೀಗ ಪರಿಸರ ಎಂಜಿನಿಯರ್ ಯಾಸ್ಮೀನ್ ಸುಲ್ತಾನ ಅವರು ಯಾವುದೇ ವೈದ್ಯರ ಸಲಹೆ, ಮಾರ್ಗದರ್ಶನ ಪಡೆಯದೆ ಎಲ್ಲಾ ಪೌರಕಾರ್ಮಿಕರ ಬಾಯಿಗೆ ಸ್ಕ್ರೀನಿಂಗ್ ಟೂಲನ್ನು ಇಟ್ಟು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭ ಸ್ಯಾನಿಟೈಸರ್ ಬಳಸಸೆ ಬಿಸಿ ನೀರಿನಲ್ಲಿ ಅದ್ದಿ ಸುರಕ್ಷತಾ ಕ್ರಮವನ್ನು ಬಳಸದೇ ಇರುವುದು ಪೌರಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ.
ಪುರಸಭೆಯ ಕೆಲ ಕಾರ್ಮಿಕರು ಸೀಲ್ ಡೌನ್ ಆದ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದು ಇವರೆಲ್ಲ ಬಾಯಿಗೂ ಸ್ರೀನಿಂಗ್ ಟೂಲನ್ನು ಇಟ್ಟು ಜ್ವರ ತಪಾಸಣೆ ನಡೆಸಿರುವುದು ಪೌರಕಾರ್ಮಿಕರಲ್ಲಿ ಭೀತಿ ಹುಟ್ಟಿಸಿದೆ. ವೈದ್ಯರು ಮಾಡಬೇಕಾದ ಕೆಲಸವನ್ನು ಪರಿಸರ ಇಂಜಿನಿಯರ್ ಸುರಕ್ಷತಾ ಕ್ರಮ ಬಳಸದೆ ಮಾಡಿರುವುದು ಪೌರಕಾರ್ಮಿಕರ ಆತಂಕವನ್ನು ಹೆಚ್ಚಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರು ಪರಿಸರ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಶೋಕಾಸ್ ನೋಟಿಸನ್ನು ಜಾರಿ ಮಾಡಿ ಮೂರು ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಿದ್ದಾರೆ.
ಪುರಸಭೆ ಕಾರ್ಯಲಯದ ಮುಂದೆಯೇ ಸರಕಾರಿ ಆಸ್ಪತ್ರೆ ಇದ್ದು, ಅಲ್ಲೆ ಮಾಡಬಹುದಿತ್ತು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಪರಿಸರ ಅಭಿಯಂತರರು ಅಸುರಕ್ಷಿತ ವಿಧಾನದಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡುವ ದೃಶ್ಯ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.
