ಕೋಲಾರ: ಮೇ.3ರವರೆಗೆ ಯಾವುದೇ ಕಾರಣಕ್ಕೂ ಲಾಕ್ಡೌನ್ ಸಡಿಲಗೊಳಿಸಬಾರದೆಂದು ರೈತಸಂಘದಿಂದ ಜಿಲ್ಲಾಡಳಿತದ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಎಡಿಸಿ ಬಿ.ಶಿವಸ್ವಾಮಿಗೆ ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌ, ಕೊರೊನಾ ವೈರಸ್ ತಡೆಗಾಗಿ ರಾಜ್ಯದಲ್ಲಿ ಸುಮಾರು 1 ತಿಂಗಳಿಂದ ಜಿಲ್ಲಾಡಳಿತ, ಪೊಲೀಸ್ ವರಿಷ್ಠಾಧಿಕಾರಿಗಳು ಆಸ್ಪತ್ರೆಯ ಸಿಬ್ಬಂದಿ ಮತ್ತಿತರರ ಎಲ್ಲಾ ಅಧಿಕಾರಿಗಳು ರಾತ್ರಿ, ಹಗಲು ಕಷ್ಟಪಟ್ಟು ನಿಯಂತ್ರಣಕ್ಕೆ ಶ್ರಮಿಸುದ್ದಾರೆ.ಒಂದು ವೇಳೆ ಮುಖ್ಯಮಂತ್ರಿಗಳು ಏ.20ರಂದು ಲಾಕ್ಡೌನ್ ಆದೇಶವನ್ನು ಸಡಿಲಗೊಳಿಸಿದರೆ ಆಂಧ್ರ, ತಮಿಳುನಾಡು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹೊಂದಿಕೊಂಡಿರುವ ನಮ್ಮ ಕೋಲಾರ ಜಿಲ್ಲೆ ಎದುರಿಸುವ ಅನಾಹುತಗಳನ್ನು ಕನಸಿನಲ್ಲೂ ಊಹಿಸಿಕೊಳ್ಳಲೂ ಭಯವಾಗುವ ಜೊತೆಗೆ ಇಷ್ಟೆಲ್ಲಾ ಮಾಡಿರುವ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅದರ ಜೊತೆಗೆ ಆದೇಶ ಮಾಡುವ ಮೊದಲು ಮಾನ್ಯ ಮುಖ್ಯಮಂತ್ರಿಗಳು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಂದ ಜಿಲ್ಲೆಯ ಸಂಪೂರ್ಣ ಮಾಹಿತಿಯನ್ನು ಪಡೆದು ಆನಂತರ ತೀರ್ಮಾನ ಮಾಡಬೇಕು. ಏಕೆಂದರೆ ಕೋಲಾರ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಈಗ ಕೃಷಿ ಕ್ಷೇತ್ರ ಮತ್ತು ಅಗತ್ಯ ವಸ್ತುಗಳನ್ನು ಹೊರತುಪಡಿಸಿ ದ್ವಿಚಕ್ರವಾಹನ, ಐಟಿಬಿಟಿ ಹಾಗೂ ಕೈಗಾರಿಕೆಗಳಿಗೆ ಅನುಮತಿ ನೀಡಿದ್ದೇ ಆದರೆ ಗ್ರಾಮೀಣ ಪ್ರದೇಶಗಳಲ್ಲಿ ನಿಯಂತ್ರಣದಲ್ಲಿದ್ದ ಈ ರೋಗ ಮಿಂಚಿನ ವೇಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮುಟ್ಟಿದರೆ ವಿದೇಶಗಳಲ್ಲಿನ ಪರಿಸ್ಥಿತಿ ನಮ್ಮ ರಾಜ್ಯದಲ್ಲೂ ಅನುಭವಿಸಬೇಕಾಗುತ್ತದೆ.
ಹಾಗಾಗಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಆದೇಶವನ್ನು ಹೊರಡಿಸಬೇಕು ಇಲ್ಲವಾದರೆ ಕಳ್ಳರು ಬಂದು ಊರು ದೋಚಿದ ಮೇಲೆ ಕೋಟೆ ಬಾಗಿಲು ಮುಚ್ಚಿದರು ಎಂಬಂತೆ ಆರೋಗ್ಯವಾಗಿರುವ ಗ್ರಾಮೀಣ ಪ್ರದೇಶದ ಜನರ ಜೀವನ ಜೊತೆ ಸರ್ಕಾರವೇ ಚೆಲ್ಲಾಟವಾಡಿದಂತಾಗುತ್ತದೆ ಎಂದು ಮನವಿ ಮೂಲಕ ಮನವರಿಕೆ ಮಾಡಿದರು.ಮನವಿ ಸ್ವೀಕರಿಸಿ ಮಾತನಾಡಿದ ಎಡಿಸಿ ಬಿ.ಶಿವಸ್ವಾಮಿ, ಅಧಿಕಾರಿಗಳ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದಿಂದ ಕೋಲಾರ ಜಿಲ್ಲೆ ಸುರಕ್ಷಿತವಾಗಿದೆ. ಅದರಲ್ಲೂ ಗಡಿಭಾಗದ ಜಿಲ್ಲೆ ಸೂಕ್ಷ್ಮವಾಗಿರುವುದರಿಂದ ಮೇ.3ರವರೆಗೆ ಲಾಕ್ಡೌನ್ ಸಡಿಲಗೊಳಿಸಬಾರದು ಎಂಬ ನಿಮ್ಮ ಮನವಿಯನ್ನು ಕೂಡಲೇ ಸರ್ಕಾರಕ್ಕೆ ತಲುಪಿಸುವ ಭರವಸೆಯನ್ನು ನೀಡಿದರು.ಈ ಸಂದರ್ಭದಲ್ಲಿ ರೈತಸಂಘದ ಮಂಗಸಂದ್ರ ವೆಂಕಟೇಶಪ್ಪ, ಮುನಿಯಪ್ಪ ಉಪಸ್ಥಿತರಿದ್ದರು.
