ಬಂಟ್ವಾಳ: ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಸಮೀಪದ ಮನೆಯೊಂದರ ಹಿಂಭಾಗ ನಡೆಯುತ್ತಿದ್ದ ಕಳ್ಳಭಟ್ಟಿ ತಯಾರಿ ಅಡ್ಡೆಗೆ ಶನಿವಾರ ಅಬಕಾರಿ ಇಲಾಖಾಧಿಕಾರಿಗಳು ದಾಳಿ ನಡೆಸಿದ್ದು,ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.
ಸ್ಥಳೀಯರಾದ ಕ್ರಿಸ್ಟನ್ ಡಿಸೋಜ ಮತ್ತು ಕಿರಣ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.ಖಚಿತ ವರ್ತಮಾನದ ಮೇರೆಗೆ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಶೈಲಜಾ ಕೋಟೆ ರವರ ನಿರ್ದೇಶನದಂತೆ ಅಬಕಾರಿ ಅಧೀಕ್ಷಕ ವಿನೋದ್ ಕುಮಾರ್ ನೇತೃತ್ವದಲ್ಲಿ, ಬಂಟ್ವಾಳ ಉಪ ವಿಭಾಗದ ಉಪ ಅಧೀಕ್ಷಕರ ಗೀತಾ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರಾದ ವಿಜಯ್ ಕುಮಾರ್ , ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಈ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿ ಕ್ರಿಸ್ಟನ್ ಡೀಸೋಜ ಎಂಬಾತನ ಮನೆಯ ಹಿಂಭಾಗದಲ್ಲಿ ಕಳ್ಳಭಟ್ಟಿ ತಯಾರಿ ನಡೆಯುತಿತ್ತು.ಈ ಸಂದರ್ಭ ಸ್ಥಳದಲ್ಲಿದ್ದ 1200 ಲೀಟರ್ ಬೆಲ್ಲದ ಕೊಳೆ ಮತ್ತು ಕಳ್ಳಭಟ್ಟಿ ತಯಾರಿಸುವ ಸಾಮಗ್ರಿ, 950 ಕೇಜಿ ಬೆಲ್ಲ ಮತ್ತು 500 ಲೀಟರ್ ನಕಲಿ ವೈನ್, 300 ಲೀಟರ್ ಬಟಾಟೆ ಮಿಶ್ರಣದ ಬೆಲ್ಲದ ಕೊಳೆಯನ್ನು ವಶಪಡಿಸಲಾಗಿದೆ.ಈ ಬಗ್ಗೆ ಜಿಲ್ಲಾ ತಂಡದ ಅಬಕಾರಿ ಉಪ ನಿರೀಕ್ಷಕ ಜಗನ್ನಾಥ ನಾಯ್ಕ ರವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
