ಕೆ.ಆರ್.ಪೇಟೆ: ಕೊರೋನಾ ಭೀತಿಯ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ಬಡಾವಣೆಗಳಿಗೆ ಕ್ರಿಮಿನಾಶಕ ಸಿಂಪಡಣೆ ಹಾಗೂ ಸ್ವಚ್ಚತೆಗೆ ಪುರಸಭೆಯು ಗಮನಹರಿಸಬೇಕು ಹಾಗೂ ಮೆಡಿಕಲ್ ಸ್ಟೋರ್ಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ದೊರೆಯುವಂತೆ ಕ್ಷೇತ್ರದ ಶಾಸಕರೂ ಆದ ಸಚಿವ ನಾರಾಯಣಗೌಡ ಅವರು ಸೂಕ್ತ ಕ್ರಮ ವಹಿಸಬೇಕು ಅಖಿಲ ಭಾರತ ವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷರು ಹಾಗೂ ವಕೀಲರಾದ ವಿ.ಎಸ್. ಧನಂಜಯ ಅವರು ಒತ್ತಾಯ ಮಾಡಿದರು.
ಅವರು ಪಟ್ಟಣದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೊರೋನಾ ತಡೆಗಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿರುವದು ಸ್ವಾಗತಾರ್ಹ. ಪ್ರಧಾನಿ ಮೋದಿ ಅವರು ದೇಶದ ಜನಸಾಮಾನ್ಯರಿಗೆ ಹಲವು ಸೇವೆಗಳನ್ನು ಕೊಡುಗೆಯಾಗಿ ನೀಡಿರುವುದು ಒಳ್ಳೆಯ ಬೆಳೆವಣಿಗೆಯಾಗಿದೆ. ಆದರೆ ಜನರಿಗೆ ಕೊರೋನಾ ಬಾರದಂತೆ ಬಳಸಲು ಅಗತ್ಯವಾಗಿ ಬೇಕಾದ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳೇ ಸಿಗುತ್ತಿಲ್ಲ. ಈ ಮೂಲ ಸೌಲಭ್ಯಗಳು ಸುಲಭವಾಗಿ ದೊರೆಯುವಂತೆ ಮಾಡಿಲ್ಲ. ಇದರಿಂದ ಜನಸಂದಣಿ ಹೆಚ್ಚಾಗುತಿದ್ದು ಮೂಲ ಉದ್ದೇಶವೇ ನಗೆಪಾಟಲಿಗೆ ಒಳಗಾಗುತ್ತಿದೆ. ಕೆ.ಆರ್.ಪೇಟೆ ಪಟ್ಟಣದ ಯಾವ ಮೆಡಿಕಲ್ ಸ್ಟೋರ್ ಗೆ ಹೋದರೂ ಮಾಸ್ಕ್ ಮತ್ತು ಸ್ಯಾನಿಟೈಸರ್ ದೊರೆಯುತ್ತಿಲ್ಲ. ಮಾಸ್ಕ್ ಹಾಕಿಲ್ಲವೆಂದು ಪೊಲೀಸರು ಲಾಟಿ ಬೀಸುತ್ತಾರೆ. ಹಣ ಕೊಡುತ್ತೇವೆಂದರೂ ಮೆಡಿಕಲ್ ಸ್ಟೋರ್ ನವರು ಪುಕ್ಕಟೆ ಕೊಡುವವರಂತೆ ಇಲ್ಲ ಎನ್ನುತಿದ್ದು ದುಬಾರಿ ಬೆಲೆ ಗೆ ಮಾರಾಟ ಮಾಡುತಿದ್ದಾರೆ. ಇದನ್ನು ತಡೆಗಟ್ಟುವಲ್ಲಿ ತಾಲ್ಲೂಕು ಟಾಸ್ಕ್ ಪೋರ್ಸ್ ಅಧ್ಯಕ್ಷರಾದ ತಹಶೀಲ್ದಾರ್ ಹಾಗೂ ಸದಸ್ಯರಗಳಾದ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ವಿಫಲವಾಗಿದ್ದಾರೆ ಎಂಉ ಆರೋಪಿಸಿದರು.
ಪೌರಾಡಳಿತ ಸಚಿವರು ನಮ್ಮ ತಾಲ್ಲೂಕಿನವರಾದರೂ ಪಟ್ಟಣಕ್ಕೆ ಉಪಯೋಗವಾಗುತ್ತಿಲ್ಲ. ಕನಿಷ್ಠ ಬಡಾವಣೆಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿಲ್ಲ. ಸ್ವಚ್ಚತೆಗೆ ಗಮನಹರಿಸಿಲ್ಲ. ಮಾನ್ಯ ಸಚಿವರು ಕ್ಷೇತ್ರವನ್ನೇ ಮರೆತಿದ್ದಾರೆ. ಅವರು ಸಂಕಷ್ಟದ ಈ ಸಮಯದಲ್ಲಿ ತಾಲ್ಲೂನಲ್ಲಿ ಮೊಕ್ಕಾಂ ಹೊಡಿ ಅಧಿಕಾರಿಗಳ ಸಭೆಯನ್ನು ಪ್ರತಿದಿನ ನಡೆಸಿ ಮುಂಜಾಗರೂಕತಾ ಕ್ರಮ ವಹಿಸಬೇಕು. ಆದರೆ ಇದ್ಯಾವುದೂ ಆಗುತ್ತಿಲ್ಲ. ಇದರಿಂದ ಅಧಿಕಾರಿಗಳು ಕಾಟಾಚಾರಕ್ಕೆ ಸಭೆ ನಡೆಸಿ, ಪತ್ರಿಕಾಗೋಷ್ಟಿ ನಡೆಸಿ ಕೈ ತೊಳೆದುಕೊಳ್ಳುತಿದ್ದಾರೆ. ಚುನಾಯಿತ ಪ್ರತಿನಿಧಿಗಳಾದ ಜಿಲ್ಲಾ ಪಂಚಾಯಿತಿ, ತಾಲ್ಲುಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಪುರಸಭೆಯ ಸದಸ್ಯರು ಈ ನಿಟ್ಟಿನಲ್ಲಿ ಕೆಲಸ ಮಾಡಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಧನಂಜಯ ಅವರು ಆಗ್ರಹಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಮೆಳ್ಳಹಳ್ಳಿ ಎಂ.ಸಿ.ಅಚ್ಯುತನ್, ಹೊಸಹೊಳಲು ಕೆ.ವಿಷಕಂಠ ಇತರರು ಇದ್ದರು.
