ಬಂಟ್ವಾಳ: ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಜಾಗೃತಿ ಕೋಶದ ವತಿಯಿಂದ ವಿದ್ಯಾರ್ಥಿನಿಯರಿಗೆ ಲಿಂಗಸೂಕ್ಷ್ಮ ತರಬೇತಿಯ ಅಂಗವಾಗಿ ’ಇಂಪಾಕ್ಟ್ ಕರಾಟೆ’ ಎಂಬ ಸ್ವರಕ್ಷಣಾ ತಂತ್ರಗಳ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಗುರುವಾರ ನಡೆಯಿತು.

ಈ ಕಾರ್ಯಾಗರದಲ್ಲಿ ತರಬೇತುದಾರರಾಗಿ ಭಾಗವಹಿಸಿದ ಅಂತರರಾಷ್ಟ್ರೀಯ ಕರಾಟೆ ತರಬೇತುದಾರ ಮಾಧವ ಅಳಿಕೆ ಮಾತನಾಡಿ, ಕರಾಟೆಯು ಭಾರತದ ಮಾರ್ಷಲ್ ಕಲೆಗಳಲ್ಲಿ ಒಂದಾಗಿದ್ದು, ವಿದ್ಯಾರ್ಥಿಗಳಲ್ಲಿ ಸ್ವರಕ್ಷಣೆ ಹಾಗೂ ಬಾಹ್ಯ ಆಕ್ರಮಣದ ವಿರುದ್ಧ ಹೋರಾಡುವ ತಂತ್ರಗಳನ್ನು ಒಳಗೊಂಡಿದೆ. ಅದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಹಾಗೂ ಶಿಸ್ತನ್ನು ಮೂಡಿಸುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಹೆಚ್.ಕೆ. ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಸ್ತುತ ಜಗತ್ತಿನಲ್ಲಿ ಎದುರಾಗುವ ಆಕ್ರಮಣಕಾರಿ ಹಾಗೂ ವೈವಿಧ್ಯಮಯ ಸವಾಲುಗಳನ್ನು ಎದುರಿಸಲು ಕೌಶಲ್ಯಗಳ ಅಗತ್ಯವಿದೆ ಎಂದರು. ಕರಾಟೆಯು ಅಂತಹ ವಿದ್ಯೆಗಳಲ್ಲಿ ಒಂದಾಗಿದ್ದು, ವಿದ್ಯಾರ್ಥಿಗಳಲ್ಲಿ ಭೌತಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವಲ್ಲಿ ಕರಾಟೆಯು ಸಹಕಾರಿಯಾಗಿದೆ ಎಂದರು.ಮುಖ್ಯ ತರಬೇತುದಾರ ಮಾಧವ ಅಳಿಕೆ ಹಾಗೂ ಅವರ ಸಹಾಯಕ ಕರಾಟೆ ಪಟುಗಳಾದ ರೋಹಿತ್ ಎಸ್.ಎನ್. ಹಾಗೂ ನಿವೇದಿತಾ ೧೬೨ ವಿದ್ಯಾರ್ಥಿನಿಯರಿಗೆ ಒಂದು ದಿನವಿಡಿ ಕರಾಟೆಯ ವಿವಿಧ ತಂತ್ರಗಳನ್ನು ಸ್ವರಕ್ಷಣೆಗೆ ಬಳಸಿಕೊಳ್ಳುವ ಕುರಿತು ತರಬೇತಿ ನೀಡಿದರು.ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದೇವಿಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಸೀಮಾ ಬೇಗಂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಸ್ವಾತಿ ಸ್ವಾಗತಿಸಿ, ಮೆಲ್ಡ್ರಿಯಾ ಡೀನಾ ಕ್ಯಾಸ್ಟೊಲಿನೊ ವಂದಿಸಿದರು. ಚೈತ್ರ ಕಾರ್ಯಕ್ರಮ ನಿರೂಪಿಸಿದರು,
