ಬಂಟ್ವಾಳ, : ವ್ಯಕ್ತಿಯ ಬುದ್ಧಿಶಕ್ತಿ ವೃದ್ಧಿ ಹಾಗೂ ಉತ್ತಮ ಆರೋಗ್ಯಕ್ಕೆ ಕ್ರೀಡೆ ಅಗತ್ಯವಾಗಿದ್ದು, ಹೀಗಾಗಿ ಪೋಷಕರು ಮಕ್ಕಳಿಗೆ ಮೊಬೆಲ್-ಕಂಪ್ಯೂಟರ್ ನೀಡುವ ಬದಲು ಅವರನ್ನು ಕ್ರೀಡೆಯಲ್ಲಿ ತೊಡಗುವಂತೆ ಪ್ರೇರಣೆ ನೀಡಬೇಕು ಎಂದು ಎಂದು ಮಂಗಳೂರು ಬೆಸೆಂಟ್ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ರತ್ನಾವತಿ ಜೆ.ಬೈಕಾಡಿ ಹೇಳಿದರು.ಅವರು ರವಿವಾರ ಬಂಟ್ವಾಳ ಅಜೆಕಲ ವಿಶ್ವಕರ್ಮ ಸಭಾಭವನದಲ್ಲಿ ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ವಿಶ್ವಜ್ಯೋತಿ ಮಹಿಳಾ ಮಂಡಳಿಯ ಸಹಯೋಗದಲ್ಲಿ ನಡೆದ ವಿಶ್ವಕರ್ಮ ಕ್ರೀಡೋತ್ಸವವನ್ನು ಉದ್ಘಾಟಿಸಿದರು.

ಸಮಾಜದ ಬಾಂಧವರಿಗೆ ಕ್ರೀಡೆ ಆಯೋಜಿಸುವುದರಿಂದ ಸಮಾಜ ಬಂಧುಗಳ ಜತೆ ಬಾಂಧವ್ಯ ಬೆಸೆಯುವುದರೊಂದಿಗೆ ಆತ್ಮೀಯತೆ ಬೆಳೆಯುತ್ತದೆ. ಹೀಗಾಗಿ ಇಂತಹ ಕೂಟಗಳಲ್ಲಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿ ಕ್ಲಪ್ತ ಸಮಯದಲ್ಲಿ ನಮ್ಮ ಇರುವಿಕೆಯನ್ನು ತೋರ್ಪಡಿಸಬೇಕಿದೆ ಎಂದರು.
ಸಂಘದ ಅಧ್ಯಕ್ಷ ಸುಧಾಕರ್ ಆಚಾರ್ಯ ಮಾರ್ನಬೈಲು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯಶಿಕ್ಷಕಿ ಗಿರಿಜಾ ಪುರುಷೋತ್ತಮ ಅಚಾರ್ಯ ಪಂಜಿಕಲ್ಲು, ಬಂಟ್ವಾಳ ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗದ ಕಿರಿಯ ಎಂಜಿನಿಯರ್ ಕೃಷ್ಣ ಪತ್ತಾರ್, ಸಂಘದ ಉಪಾಧ್ಯಕ್ಷ ಯಶೋಧರ ಆಚಾರ್ಯ, ವಿಶ್ವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ಪುಷ್ಪಾ ಡಿ.ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಚಂದ್ರಶೇಖರ ಆಚಾರ್ಯ ಪೂಂಜರಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರತ್ನಾವತಿ ಜೆ.ಬೈಕಾಡಿ ಅವರನ್ನು ಸಮ್ಮಾನಿಸಲಾಯಿತು. ಸಂಘದ ಕೋಶಾಧ್ಯಕ್ಷ ಜಯಚಂದ್ರ ಆಚಾರ್ಯ ಸರಪಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ್ ಆಚಾರ್ಯ ಭಂಡಾರಿಬೆಟ್ಟು ವಂದಿಸಿದರು.
