ಗುರುಪುರ : ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ದೈವಸ್ಥಾನದ ವಠಾರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ-ಎಸ್ಪಿವೈಎಸ್ಸೆಸ್) ಕರ್ನಾಟಕದ ಪೊಳಲಿ ನಗರ ಶಾಖೆ ವತಿಯಿಂದ `ರಥಸಪ್ತಮಿ’ ಪ್ರಯುಕ್ತ ಶನಿವಾರ ಮುಂಜಾನೆ 4:30ರಿಂದ 6 ಗಂಟೆಯವರೆಗೆ ಬೃಹತ್ ಯೋಗ ಕಾರ್ಯಕ್ರಮ ನಡೆಯಿತು.
ಶ್ರೀ ವೈದ್ಯನಾಥ ದೈವಸ್ಥಾನದ ವೈದ್ಯನಾಥ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು ಮತ್ತು ದೋಣಿಂಜೆಗುತ್ತು ಪುರಂದರ ಮಲ್ಲಿ ದೀಪ ಬೆಳಗಿಸಿ ಯೋಗ ಕಾರ್ಯಕ್ರಮ ಉದ್ಘಾಟಿಸಿದರು. 13 ಶಾಖೆಗಳನ್ನೊಳಗೊಂಡಿರುವ ಪೊಳಲಿ ನಗರ ಶಾಖೆ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಪೊಳಲಿ, ಕಾಜಿಲ, ಕಾಂಜಿಲಕೋಡಿ, ಮಳಲಿ, ನಾಡಜೆ, ಕಾಂಬೆಟ್ಟು, ಗುರುಪುರ, ಕೈಕಂಬ, ಎಡಪದವು, ಕುಪ್ಪೆಪದವು-ಕಡೆಗುಂಡ್ಯ, ಮಿಜಾರು, ಅಮ್ಮುಂಜೆ ಶಾಖೆಗಳ ಸಂಚಾಲಕರು, ಸಹ-ಸಂಚಾಲಕರು ಹಾಗೂ ಪ್ರಮುಖರ ಸಹಿತ ಸುಮಾರು 250ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಗುರುಪುರ ಶಾಖೆಯ ಪ್ರಮುಖ ಕೃಷ್ಣ ಸಾಲ್ಯಾನ್ ವಂದಿಸಿದರು.



