ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಾನದಲ್ಲಿ ಐತಿಹಾಸಿಕ ಮಹತ್ವದ ಬ್ರಹ್ಮಕಲಶೋತ್ಸವದ ಸಂಭ್ರಮ.ಈ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ವೈದಿಕ ಉಗ್ರಾಣ ಮುಹೂರ್ತ, ರಥಬೀದಿಯಲ್ಲಿ ದೊಡ್ಡ ಉಗ್ರಾಣ ಮುಹೂರ್ತ, ಅರಣೀಮಥನ, ಬ್ರಹ್ಮಕೂರ್ಚ ಹೋಮ, ಅಥರ್ವ ಶೀರ್ಷ ಗಣಯಾಗ, ಸಂಜೆ 5ರಿಂದ ಸಪ್ತಶುದ್ಧಿ, ಗೋಪೂಜೆ, ವಾಸ್ತುಪೂಜೆ ಮೊದಲಾದ ಪೂಜಾ ವಿಧಾನಗಳು ನಡೆಯಲಿದೆ. ಶ್ರೀ ದೇವರ ಮೂಲಸಾನ್ನಿಧ್ಯ ಕುದುರು ಭ್ರಾಮರೀವನದಲ್ಲಿ ಬೆಳಿಗ್ಗೆ ತೋರಣ ಮುಹೂರ್ತ ನಡೆಯಿತು.ಒಡೆಯರ್ ಮೆರುಗು ಕಟೀಲು ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳ ಮುಹೂರ್ತ, ಉದ್ಘಾಟನೆ ಯನ್ನು ಮೈಸೂರಿನ ಮಹಾಸಂಸ್ಥಾನದ ಯದುವೀರ್ ಕೃಷ್ಣದತ್ತ ಒಡೆಯರ್ ನೆರವೇರಿಸಿದರು.
ಧಾರ್ಮಿಕ ಸಭೆ:
ಸಂಜೆ 5ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದ್ದು ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀ ಪಾದಂಗಳವರು, ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು ಅನುಗ್ರಹ ಸಂದೇಶ ನೀಡಲಿದ್ದು ಶರವು ರಾಘವೇಂದ್ರ ಶಾಸ್ತ್ರಿ ಅವರು ಅಧ್ಯಕ್ಷತೆ ವಹಿಸುವರು. ಇದೇ ವೇಳೆ ವೀಣಾ ಬನ್ನಂಜೆ ಅವರು ಬದುಕು ಮತ್ತು ದೇವರು ವಿಶಯವಾಗಿ ಉಪನ್ಯಾಸ ನೀಡಲಿದ್ದಾರೆ.
ನಿರಂತರ ಹೊರೆಕಾಣಿಕೆ ಆಗಮನ, ದಾಸೋಹ ವೈವಿಧ್ಯ:
ಬೆಳಗ್ಗೆ 8.30ರ ವೇಳೆಗೆ ಶಿಬರೂರಿನಿಂದ ವೈದಿಕ ಸಾಮಗ್ರಿ ಗಳ ವೈದಿಕ ಹೊರೆಕಾಣಿಕೆ ಆಗಮಿಸಲಿದ್ದು ನಂತರದಲ್ಲಿನಾಡಿನೆಲ್ಲೆಡೆಯಿಂದ ಹೊರೆಕಾಣಿಕೆಗಳ ಮೆರವಣಿಗೆ ನಿರಂತರ ಆಗಮಿಸಲಿದೆ. ಕ್ಷೇತ್ರದ ಸಿತ್ಲಬೈಲಿನ ವಿಶಾಲ ಅನ್ನದೇಗುಲದಲ್ಲಿ ಬೆಳಿಗ್ಗೆ 6ರಿಂದ ಮೂಡೆಗಸಿಯೊಂದಿಗೆ ಪ್ರಾರಂಭಗೊಳ್ಳುವ ಉಪಹಾರ 11.30ರವರೆಗೂ ವೆರೈಟಿ ತಿಂಡಿಗಳು, ಸ್ವೀಟ್ ಕಡಿ ಚಹಾ-ಕಾಫಿ ಉಪಹಾರ, 11.30ರಿಂದ ರುಚಿ- ರುಚಿಯ ಅನ್ನದಾನ 3 ಗಂಟೆವರೆಗೆ ಬಳಿಕ 3.30ರಿಂದ ರಾತ್ರಿ 7ರವರೆಗೆ ಲಘು ಉಪಹಾರ. ರಾತ್ರಿ 7ರಿಂದ ಮತ್ತೆ ಅನ್ನದಾನ ಪ್ರಾರಂಭಗೊಂಡು ಮಧ್ಯರಾತ್ರಿ 1 ಗಂಟೆಯವರೆಗೂ ನೆರವೇರಲಿದೆ.
ಇತರ ವ್ಯವಸ್ಥೆಗಳು: ಗಿಡಿಗೆರೆಯಿಂದ ಅಜಾರುವರೆಗೆ ವ್ಯಾಪಾರ ಮಳಿಗೆ-ಸ್ಟಾಲುಗಳು, ಡಿಗ್ರಿ ಕಾಲೇಜು ಮೈದಾನದಲ್ಲಿ ಮಕ್ಕಳ ಮನರಂಜನೆ ಕೇಂದ್ರ ಮೊದಲಾದ ವ್ಯವಸ್ಥೆಗಳಿವೆ.
ವಾಹನಗಳಿಗೆ ಸೂಚನೆ:
ಬಜಪೆ ಕಡೆಯಿಂದ ಮುಖ್ಯ ಕಡೆಗೆ ನೇರ ಹೋಗುವವರು ಶಿಬರೂರು ರಸ್ತೆಯಲ್ಲಿ, ಕಟೀಲು ಕಡೆಗೆ ಬರುವವರು ಎಕ್ಕಾರು ರಸ್ತೆಯಲ್ಲಿ ಆಗಮಿಸಿ ಅಲ್ಲಲ್ಲಿಪಾರ್ಕಿಂಗ್ ವ್ಯವಸ್ಥೆ, ಸೂಚನಾ ಫಲಕಗಳನ್ನು ಗಮನಿಸಿ ಸ್ವಯಂ ಸೇವಕರ ಸಹಾಯ ಪಡೆದು ಪ್ರಯಾಣ ಮುಂದುವರಿಸಬಹುದಾಗಿದ್ದು, ಕಿನ್ನಿಗೋಳಿ ಕಡೆಯಿಂದ ಬರುವವರು ಗಿಡಿಗೆರೆವರೆಗೂ ಆಗಮಿಸಿ ಬಲಕ್ಕೆ ತಿರುಗಿ ಮುಂದುವರಿಯಬೇಕು.


