ಮೂಡುಬಿದಿರೆ:ಆಧಾರ ಕಾರ್ಡ್ ಸಹಿತ ದಾಖಲೆಗಳಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಾಗರಿಕರ ಸಮಸ್ಯೆಯನ್ನು ಅರಿತು ಸಕಾಲದಲ್ಲಿ ತಪ್ಪುಗಳನ್ನು ಸರಿಪಡಿಸಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದಾಗ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ನಾಗರಿಕರಿಗೆ ತಲುಪಿಸಲು ಸಾಧ್ಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಪಡುಮಾರ್ನಾಡು ಗ್ರಾಪಂ, ರೋಟರಿ ಕ್ಲಬ್ ಮಿಡ್ಟೌನ್ ಮೂಡುಬಿದಿರೆ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದೊಂದಿಗೆ ಗುರುವಾರ ಪಂಚಾಯಿತಿ ಸಭಾಭವನದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿದರು.
ಪಡುಮಾರ್ನಾಡು ಗ್ರಾಪಂ ಅಧ್ಯಕ್ಷ ದಯಾನಂದ ಪೈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಪಡುಮಾರ್ನಾಡು, ಮೂಡುಮಾರ್ನಾಡು ಗ್ರಾಮಗಳ ಅಭಿವೃದ್ಧಿಗೆ ಶಾಸಕರು ಅನುದಾನವನ್ನು ಒದಗಿಸುತ್ತಿದ್ದಾರೆ. ದಶಕದಿಂದ ಐದು ಸೆಂಟ್ಸ್ ನಿವೇಶನದ ಬೇಡಿಕೆ ಇದೆ. ಶಾಸಕರು ಈ ಬಗ್ಗೆ ತಹಸೀಲ್ದಾರ್ ಸೂಚಿಸಿ ಶೀಘ್ರ ಮಂಜೂರು ಮಾಡುವಂತೆ ಒತ್ತಾಯಿಸಿದರು.
ಜಿಪಂ ಸದಸ್ಯೆ ಕೆ.ಪಿ ಸುಜಾತ, ತಾಪಂ ಸದಸ್ಯ ಪ್ರಶಾಂತ್ ಅಮೀನ್, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಾಥ್ ಸುವರ್ಣ, ಸದಸ್ಯರಾದ ಶೋಭಾ ದಿನೇಶ್, ಅಭಿನಂದನ್, ಸೂರಜ್, ಉಮೇಶ್, ಮಲ್ಲಿಕಾ, ಶೋಭಾ ವಸಂತ್, ಯಶೋಧರ ಆಚಾರ್ಯ, ರೋಟರಿ ಮಿಡ್ಟೌನ್ ಅಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ, ಕಾರ್ಕಳ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಧನಂಜಯ ಆಚಾರ್, ಇಲಾಖೆಯ ಪುತ್ತೂರು ವಿಭಾಗ ಮಾರುಕಟ್ಟೆ ವಿಭಾಗದ ಅಧಿಕಾರಿ ಗುರು ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಪಿಡಿಒ ರವಿ ಕಾರ್ಯಕ್ರಮ ನಿರೂಪಿಸಿದರು.
