ಬಂಟ್ವಾಳ: ತುಂಬೆ ಗ್ರಾಮದ ಮಾರಿಪಳ್ಳ ರೊಟ್ಟಿಗುಡ್ಡೆಯ ಹಿಂದೂ ರುದ್ರ ಭೂಮಿ ಬಳಿ ಕಳೆದ ವರ್ಷ ಮೇ ತಿಂಗಳಿನಲ್ಲಿ ದರೋಡೆಗೆ ವಿಫಲ ಸಂಚು ನಡೆದ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯವು ಮೂರು ವರ್ಷ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಉಳ್ಳಾಲ ಮೇಲಂಗಡಿ ಮಿಲಾತ್ ನಗರ ಹಮೀದ್ ಅವರ ಪುತ್ರ ಮಹಮ್ಮದ್ ಅರ್ಫಾಜ್( 19),ಪುದುಗ್ರಾಮದ ಮಾರಿಪಳ್ಳ ನಿವಾಸಿ ಅಬ್ದುಲ್ ಸಿದ್ದಿಕ್ ರವರ ಪುತ್ರ ಶಾಕೀರ್ (20),ಪುದು ಗ್ರಾಮದ ರೊಟ್ಟಿಗುಡ್ಡೆ ನಿವಾಸಿ ಅಬ್ದುಲ್ ರಹಿಮಾನ್ ರವರ ಪುತ್ರ ನೌಫಲ್. ಟಿ (24), ಪುದು ಗ್ರಾಮದ ರೊಟ್ಟಿಗುಡ್ಡೆ ನಿವಾಸಿ ಅಬ್ದುಲ್ ರಜಾಕ್ ರವರ ಪುತ್ರ ಶಮೀರ್. ಟಿ (24) ಹಾಗೂ ಪುದು ಗ್ರಾಮದ ಮಾರಿಪಳ್ಳ ನಿವಾಸಿ ಅಬ್ದುಲ್ ರಹಿಮಾನ್ ರವರ ಪುತ್ರಮಹಮ್ಮದ್ ನಿಸಾರ್(22) ಶಿಕ್ಷೆಗೊಳಗಾದ ಆರೋಪಿಗಳು. 2018 ರ ಮೇ 5 ರಂದು ರಾತ್ರಿ ಸುಮಾರು 11.30 ರ ವೇಳೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ. ಎಂ.ಎಸ್ ಮತ್ತವರ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ ಸುರೇಶ್ ಕುಮಾರ್ ಮತ್ತು ಗಿರೀಶ್ ರವರು ರಾತ್ರಿ ಗಸ್ತಿನಲ್ಲಿದ್ದಾಗ ಖಚಿತ ಮಾಹಿತಿಯೊಂದನ್ನು ಆಧರಿಸಿ ದಾಳಿ ಕಾರ್ಯಾ ಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು, ಆಗಿನ ಬಂಟ್ವಾಳ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಎಂ.ಎಸ್ ಪ್ರಕಾಶ್ ರವರು ತನಿಖೆ ನಡೆಸಿ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಬಳಿಕ ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯವು ಆರೋಪಿಗಳಿಗೆ ಮೂರು ವರ್ಷ ಸಾದಾ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರೀಶ್ಚಂದ್ರ ಉದ್ಯಾವರ ಅವರು ವಾದಿಸಿದ್ದರು.
