ಅಡ್ಯನಡ್ಕ: ಅಡ್ಯನಡ್ಕ ಜನತಾ ಆಂಗ್ಲ ಮಾಧ್ಯಮ ಹಾಗೂ ಜನತಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ‘ವಾಟರ್ ಬೆಲ್’ ಯೋಜನೆಗೆ ಡಿ.24ರಂದು ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ, ಆಡಳಿತಾಧಿಕಾರಿ ರಮೇಶ ಎಂ. ಬಾಯಾರು, ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ರಮ್ಯಶ್ರೀ, ಜನತಾ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಮಾಧವ ನಾಯ್ಕ್ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎಲ್ಲ ಮಕ್ಕಳೂ ಸಮರ್ಪಕವಾಗಿ ನೀರು ಕುಡಿಯಲು ಶಾಲೆಯಲ್ಲಿ ‘ವಾಟರ್ ಬೆಲ್’ ಯೋಜನೆ ಜಾರಿಗೆ ತರಲಾಗಿದೆ.ವಾಟರ್ ಬೆಲ್ ಹೊಡೆದ ಸಂದರ್ಭ ಎಲ್ಲ ಮಕ್ಕಳೂ ಏಕ ಕಾಲಕ್ಕೆ ತಮ್ಮ ಬಾಟಲ್ ತೆಗೆದುಕೊಂಡು ನೀರು ಕುಡಿಯಬೇಕು. ಈ ಸಂದರ್ಭವನ್ನು ಸ್ಥಳದಲ್ಲಿದ್ದ ಶಿಕ್ಷಕರು ರುಜುವಾತು ಪಡಿಸಿಕೊಳ್ಳುತ್ತಾರೆ. ವಾಟರ್ ಬೆಲ್ ಯೋಜನೆ ಮಕ್ಕಳಲ್ಲಿ ನಿರ್ಜಲೀಕರಣ, ಉರಿಮೂತ್ರ, ವಾತ ಮುಂತಾದ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿದ್ದು, ಅವರ ಓದಿಗೆ ಪೂರಕ ವಾತಾವರಣ ಸೃಷ್ಟಿಸುವಂತೆ ಮಾಡಲಿದೆ.
ದೇಹದಲ್ಲಿ 55ರಿಂದ 75 ಶೇಕಡಾದಷ್ಟು ನೀರಿದೆ. ದೇಹಕ್ಕೆ ನೀರು ಅತ್ಯವಶ್ಯ. ನಿರ್ಜಲೀಕರಣದಿಂದ ತಲೆನೋವು, ಸೋಮಾರಿತನ, ನಿಶ್ಶಕ್ತಿ, ಮೂತ್ರದ ಪ್ರಮಾಣ ಕಡಿಮೆಯಾಗುವುದು, ಕ್ರಮೇಣ ಮೂತ್ರಪಿಂಡ ವೈಫಲ್ಯ ಉಂಟಾಗಬಹುದು. ದಿನವಿಡೀ ಕನಿಷ್ಟ 2ರಿಂದ 4 ಲೀಟರ್ ನೀರು ಕುಡಿಯುವ ಮೂಲಕ ಶರೀರದ ಜಲೀಕರಣ ಕಾಯ್ದುಕೊಳ್ಳಬೇಕು. ಹೀಗಾಗಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗಿದ್ದು, ಇದು ಮಕ್ಕಳಲ್ಲಿ ಒಳ್ಳೆಯ ಪರಿಣಾಮ ಬೀರಲಿದೆ.
