ಬಂಟ್ವಾಳ : ತಾಲೂಕಿನಾದ್ಯಂತ ಭಾನುವಾರ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಸಂಭ್ರಮದ ಮೀಲಾದುನ್ನಬೀ ಕಾರ್ಯಕ್ರಮ ಆಚರಿಸಲಾಯಿತು.
ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಸ್ವಲಾತ್ ಮೆರವಣಿಗೆಯನ್ನು ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಅವರು ಮಸೀದಿ ಅಧ್ಯಕ್ಷ ಉಮರ್ ಹಾಜಿ ದೆಂಜಿಪ್ಪಾಡಿ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನಡೆದ ರ್ಯಾಲಿಯು ಆಲಡ್ಕ ಮಸೀದಿಯಿಂದ ಹೊರಟು ಬಂಗ್ಲೆಗುಡ್ಡೆ ಸಾಗಿ ಬಳಿಕ ಅಲ್ಲಿಂದ ಮೆಲ್ಕಾರ್ ಮಾರ್ಗವಾಗಿ ಗುಡ್ಡೆಅಂಗಡಿ ತಲುಪಿ ಅಲ್ಲಿಂದ ಮರಳಿ ಆಲಡ್ಕದಲ್ಲಿ ಸಮಾಪ್ತಿಗೊಂಡಿತು.
ಗುಡ್ಡೆಅಂಗಡಿ: ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಸ್ವಲಾತ್ ಮೆರವಣಿಗೆ ಭಾನುವಾರ ನಡೆಯಿತು. ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಮಸೀದಿ ಖತೀಬ್ ಹಂಝ ಫೈಝಿ, ಮಸೀದಿ ಅಧ್ಯಕ್ಷ ಎಸ್. ಮುಹಮ್ಮದ್, ಪದಾಧಿಕಾರಿಗಳಾದ ಅಬ್ದುಲ್ ಹಮೀದ್, ಉಮರ್ ಫಾರೂಕ್, ಹನೀಫ್, ಮಜೀದ್ ಮೇಸ್ತ್ರಿ, ಅಬೂಬಕ್ಕರ್ ಮೆಲ್ಕಾರ್, ಮದ್ರಸ ಮುಖ್ಯ ಶಿಕ್ಷಕ ಶರೀಫ್ ಮುಸ್ಲಿಯಾರ್, ಮದ್ರಸ ಅಧ್ಯಾಪಕರುಗಳಾದ ಅಬ್ಬಾಸ್ ಮುಸ್ಲಿಯಾರ್, ಸೈದಾಲಿ ಮುಸ್ಲಿಯಾರ್ ಮೊದಲಾದವರು ಭಾಗವಹಿಸಿದ್ದರು. ಸ್ವಲಾತ್ ಮೆರವಣಿಗೆಯು ಗುಡ್ಡೆಅಂಗಡಿ ಮಸೀದಿಯಿಂದ ಹೊರಟು ಮೆಲ್ಕಾರ್ ಮಾರ್ಗವಾಗಿ ಆಲಡ್ಕ, ಬಳಿಕ ಅಲ್ಲಿಂದ ವಾಪಾಸು ಬೋಗೋಡಿ ಮಾರ್ಗವಾಗಿ ಗುಡ್ಡೆಅಂಗಡಿಯಲ್ಲಿ ಸಮಾಪ್ತಿಗೊಂಡಿತು.

ನಂದಾವರ: ನಂದಾವರ ಕೇಂದ್ರ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸದ ಎಸ್.ಕೆ.ಎಸ್.ಬಿ.ವಿ. ವತಿಯಿಂದ ಮೀಲಾದ್ ಮೆರವಣಿಗೆ ನಂದಾವರದಿಂದ ಮಾರ್ನಬೈಲುವರೆಗೆ ಸಾಗಿ ಮರಳಿ ನಂದಾವರ ಮಸೀದಿ ಬಳಿ ಸಮಾಪ್ತಿಗೊಂಡಿತು. ಮಸೀದಿ ಅಧ್ಯಕ್ಷ ಬಶೀರ್ ನಂದಾವರ, ಖತೀಬ್ ಅಬ್ದುಲ್ ಮಜೀದ್ ದಾರಿಮಿ, ಮಜೀದ್ ಫೈಝಿ ನಂದಾವರ, ಶರೀಫ್ ಮಲ್ಪೆ, ಆರಿಫ್ ನಂದಾವರ ಮೊದಲಾದವರು ಭಾಗವಹಿಸಿದ್ದರು.
ಗೂಡಿನಬಳಿ: ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಸ್ವಲಾತ್ ಮೆರವಣಿಗೆ ಭಾನುವಾರ ನಡೆಯಿತು. ಮಸೀದಿ ಬಳಿಯಿಂದ ಹೊರಟ ಮೆರವಣಿಗೆ ಬಿ ಸಿ ರೋಡು ಮುಖ್ಯ ವೃತ್ತದಿಂದ ಬಂಟ್ವಾಳ ಕೆಳಗಿನಪೇಟೆ ವರೆಗೆ ಸಾಗಿ ಮರಳಿ ಗೂಡಿನಬಳಿಯಲ್ಲಿ ಸಮಾಪ್ತಿಗೊಂಡಿತು.

ಬಂಟ್ವಾಳ-ಕೆಳಗಿನಪೇಟೆ: ಬಂಟ್ವಾಳ-ಕೆಳಗಿನಪೇಟೆ ಜುಮಾ ಮಸೀದಿ ಹಾಗೂ ಮನಾರುಲ್ ಇಸ್ಲಾಂ ಮದ್ರಸ ವತಿಯಿಂದ ಈದ್ ಮಿಲಾದ್ ರ್ಯಾಲಿ ನಡೆಯಿತು. ರ್ಯಾಲಿಯಲ್ಲಿ ಮಸೀದಿ ಖತೀಬ್ ಉಸ್ಮಾನ್ ದಾರಿಮಿ, ಪುರಸಭಾ ಸದಸ್ಯ ಮೂನಿಶ್ ಅಲಿ ಅಹ್ಮದ್, ಅಬ್ದುಲ್ ಖಾದರ್ ಮಾಸ್ಟರ್, ಸಗೀರ್ ಅಹ್ಮದ್ ಮೊದಲಾದವರು ಭಾಗವಹಿಸಿದ್ದರು. ಸಜೀಪನಡು: ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದಲ್ಲಿ ಹಝ್ರತ್ ಮೊಹಮ್ಮದ್ ಪೈಗಂಬರರ ಜನ್ಮದಿನವಾದ ಇಂದು ಸಜಿಪ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ. ಅಬ್ದುಲ್ ರಝಾಕ್ ರವರ ನೇತ್ರತ್ವದಲ್ಲಿ ಸಂಭ್ರಮದ ಮೀಲಾದುನ್ನಬಿ ದಿನಾಚರಣೆಯನ್ನು ಆಚರಿಸಲಾಯಿತು.
ಸಮಾರಂಭದಲ್ಲಿ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಸಮೀತಿಯ ಅಧ್ಯಕ್ಷರಾದ ಹಾಜಿ. ಎಸ್ ಅಬ್ಬಾಸ್ ಸಜೀಪ, ಮಂಗಳೂರಿನ ಬದ್ರಿಯಾ ಜುಮಾ ಮಸೀದಿಯ ಕತೀಬರಾದ ಶೇಖಬ್ಬ ಮುಸ್ಲಿಯಾರ್, ಕೇಂದ್ರ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಎಸ್.ಮೊಹಮ್ಮದಾಲಿ, ಕೇಂದ್ರ ಜಮಾಅತ್ ಸಮೀತಿಯ ಪ್ರಧಾನ ಕಾರ್ಯದರ್ಶಿಯಾದ ಎಸ್.ಕೆ ಮೊಹಮ್ಮದ್, ಉಪಾಧ್ಯಕ್ಷರಾದ ಆಶಿಫ್ ಕುನ್ನಿಲ್, ಹಾಗೂ ಇನ್ನಿತರ ಉಲಮಾ ಹಾಗೂ ಉಮರಾಗಳು ಪಾಲ್ಗೊಂಡಿದ್ದರು, ನಂತರ ಕೇಂದ್ರ ಜುಮಾ ಮಸೀದಿಯ ಮುದರ್ರಿಸರಾದ ಬಹು. ಅಬೂಸ್ವಾಲಿಹ್ ಫೈಝಿ, ಯವರು ದುವಾ ಮಾಡುವುದರೊಂದಿಗೆ ಮೀಲಾದ್ ರ್ಯಾಲಿಗೆ ಚಾಲನೆಯನ್ನು ನೀಡಿದರು, ಮೀಲಾದ್ ರ್ಯಾಲಿಯು ಸಜೀಪದ ರಾಜ ಮಾರ್ಗದಲ್ಲಿ ಸಾಗಿ ಸಜೀಪ ಜಂಕ್ಷನ್ ವರೇಗೂ ನಡೆಯಿತು.
