ಮಂಗಳೂರು ದಸರಾ 2014 – ಮಂಗಳೂರಿನ ಕುದ್ರೋಳಿಯಲ್ಲಿ ನಡೆಯುವ ದಸರಾ ಹಬ್ಬ ಕರಾವಳಿ ಕರ್ನಾಟಕದಲ್ಲಿಯೇ ದೊಡ್ಡ ಹಬ್ಬ. ಇದು ಮಂಗಳೂರು ದಸರಾ ಎಂದೇ ಖ್ಯಾತಿ. 1990ರಿಂದ ದಸರಾ ಹಬ್ಬದ ಆಚರಣೆ ಆರಂಭವಾಯಿತು. ಸಾವಿರಾರು ಭಕ್ತರು ನವರಾತ್ರಿ ಉತ್ಸವದಲ್ಲಿ ಭಾಗವಹಿಸಿ ಪುನೀತರಾಗುತ್ತಾರೆ. ವಿದ್ಯುತ್ ದೀಪಗಳಿಂದ ದೇವಸ್ಥಾನವನ್ನು ಅಲಂಕಾರ ಮಾಡಲಾಗಿದೆ. ಇಲ್ಲಿರುವ ಕಲ್ಯಾಣ ಮಂಟಪದಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಲಾಗಿದೆ. ಶಾರದಾದೇವಿಯನ್ನು ಮಧ್ಯದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಶೈಲಪುತ್ರಿ, ಆದಿಶಕ್ತಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಗೌರಿ, ಕೂಷ್ಮಾಂಡಿನಿ, ಬ್ರಹ್ಮಚಾರಿಣಿ, ಸಿದ್ಧಿಧಾತ್ರಿ, ಚಂದ್ರಘಂಟ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ದಸರಾ ಸಂದರ್ಭ ದೇವಸ್ಥಾನ ಮಾತ್ರವಲ್ಲ ಮಂಗಳೂರು ನಗರವಿಡೀ ಜಗಮಗಿಸುತ್ತಿರುತ್ತದೆ.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವದ ಸಂಭ್ರಮ ಆರಂಭಗೊಂಡಿದೆ. ನವದುರ್ಗೆಯರ ಮೂರ್ತಿಗಳನ್ನು ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾಕ್ಕೆ ಚಾಲನೆ ನೀಡಿದರು.
ಸೆ.25ರಿಂದ ಅ.3ರವರೆಗೆ ಪ್ರತಿದಿನ ಕುದ್ರೋಳಿ ಸಂತೋಷಿ ಕಲಾ ಮಂಟಪದಲ್ಲಿ ನಾಡಿನ ಹೆಸರಾಂತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಚಿತ್ರಗಳು : ಮಧು ಕುಮಾರ್











