ಕೋಲಾರ : ಶಿಕ್ಷಕರಾಗಿದ್ದುಕೊಂಡು ಸರ್ಕಾರಿ ಶಾಲೆಯ ಮಕ್ಕಳಿಗೆ ಅಪಾರ ಪ್ರಮಾಣದಲ್ಲಿ ಶೈಕ್ಷಣಿಕ ನೆರವು,ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ಕೊಡಿಸಿ ಸಾಮಾಜಿಕ ಕಾಳಜಿ ಮೆರೆದಿದ್ದ ಎಸ್.ನಾರಾಯಣಸ್ವಾಮಿ ಅವರ ಕಾರ್ಯ ಮರೆಯಲಾರದಂತದ್ದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ತಿಳಿಸಿದರು. ತಾಲ್ಲೂಕಿನ ಗುಡ್ಡನಪುರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು, ಇದೀಗ ಸ್ವಯಂ ನಿವೃತ್ತಿ ಹೊಂದಿರುವ ನಾರಾಯಣಸ್ವಾಮಿ ಅವರನ್ನು ಗ್ರಾಮಸ್ಥರು,ಎಸ್‍ಡಿಎಂಸಿ ಮತ್ತು ಶಾಲೆ ವತಿಯಿಂದ ಬೀಳ್ಕೊಟ್ಟು ಅವರು ಮಾತನಾಡುತ್ತಿದ್ದರು. ಶಿಕ್ಷಕ ಗೆಳೆಯರ ಬಳಗದಲ್ಲಿ ಗುರುತಿಸಿಕೊಂಡಿದ್ದ ನಾರಾಯಣಸ್ವಾಮಿ ತಮ್ಮ ಶಾಲೆಗೆ ಮಾತ್ರವಲ್ಲ, ಇಡೀ ಜಿಲ್ಲೆಯ ಸರ್ಕಾರಿ ಶಾಲೆಗಳ ಲಕ್ಷಾಂತರ ಮಕ್ಕಳಿಗೆ ಉಚಿತ ನೋಟ್‍ಪುಸ್ತಕ, ಸಮವಸ್ತ್ರ, ಪರೀಕ್ಷಾ ಪ್ಯಾಡ್ ಮತ್ತಿತರ ಕಲಿಕಾ ಸಾಮಗ್ರ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದರು ಎಂದರು.

24kolar6

ಇದೀಗ ಅವರು ಸ್ವಯಂ ನಿವೃತ್ತರಾದರೂ ಸರ್ಕಾರಿ ಶಾಲೆಗಳ ಮಕ್ಕಳ ಮೇಲಿನ ಪ್ರೀತಿ ಕುಂದದೇ ಮತ್ತಷ್ಟು ನೆರವು ಒದಗಿಸುವ ರೀತಿಯಲ್ಲಿ ಕಾರ್ಯೋನ್ಮುಖರಾಗಲಿ ಎಂದು ಹಾರೈಸಿದರು. ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಮಾತನಾಡಿ, ನಾರಾಯಣಸ್ವಾಮಿ ಅವರು, ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ದಾನಿಗಳಿಂದ ಮಾತ್ರವಲ್ಲ ತಮ್ಮ ಸ್ವಂತ ಹಣದಿಂದಲೂ ಮಕ್ಕಳಿಗೆ ಸಹಾಯ ಮಾಡಿದ್ದಾರೆ, ತಮ್ಮ ತಾಯಿಯ ನೆನಪಿನಲ್ಲೂ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೆರವಾಗುತ್ತಾ ಬಂದಿದ್ದು, ಅವರ ಹೃದಯವಂತಿಕೆಗೆ ಸಾಟಿಯಿಲ್ಲ ಎಂದರು. ಕಾರ್ಯಕ್ರಮದಲ್ಲಿ ಸಿಆರ್‍ಪಿಗಳಾದ ಸೌಮ್ಯಲತಾ, ಮುಖ್ಯ ಶಿಕ್ಷಕಿ ಜೆ.ಎಂ.ಉಷಾರಾಣಿ, ಎಸ್‍ಡಿಎಂಸಿ ಅಧ್ಯಕ್ಷ ಜಿ.ಜಿ.ಹರೀಶ್, ಮುಖ್ಯ ಅಡುಗೆಸಿಬ್ಬಂದಿ ಸಿ.ರುಕ್ಮಣಿಯಮ್ಮ, ಎಸ್‍ಡಿಎಂಸಿ ಸದಸ್ಯರಾದ ಜಿ.ಇ.ಸೋಮಶೇಖರ್, ನಾರಾಯಣಸ್ವಾಮಿ, ಮಾಲಾ, ಮಂಗಳಾ ಹಾಗೂ ಗ್ರಾಮಸ್ಥರು ಹಾಜರಿದ್ದರು. ಕೋಲಾರ ತಾಲ್ಲೂಕಿನ ಗುಡ್ಡನಪುರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು, ಇದೀಗ ಸ್ವಯಂ ನಿವೃತ್ತಿ ಹೊಂದಿರುವ ನಾರಾಯಣಸ್ವಾಮಿ ಅವರನ್ನು ಗ್ರಾಮಸ್ಥರು,ಎಸ್‍ಡಿಎಂಸಿ ಮತ್ತು ಶಾಲೆ ವತಿಯಿಂದ ಬೀಳ್ಕೊಡಲಾಯಿತು.

By suddi9

Leave a Reply

Your email address will not be published. Required fields are marked *