ಕುಪ್ಪೆಪದವು ಉದಾತ್ತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಾನು ಬದುಕಿ ಇತರರನ್ನು ಬದುಕಲು ಬಿಡುವುದು ಮಾನವಧರ್ಮ ಎಂದು ಮೂಡಬಿದ್ರೆ ಜೈನ ಮಠದ ಭಾರತ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಹೇಳಿದ್ದಾರೆ.
ಅವರು ಅದಿತ್ಯವಾರ ಕುಪ್ಪೆಪದವಿನ ಅನಂತ್ಯಾಜ ಸಭಾಭವನದಲ್ಲಿ ಜರುಗಿದ ಭಾರತೀಯ ಜೈನ್ ಮಿಲನ್ ಬಂಟ್ವಾಳ ಘಟಕ ಮಂಗಳೂರು ವಿಭಾಗ ಸಂಯೋಜಿತ ಅನಂತಪಾಶ್ವ ಜೈನ್ ಮಿಲನ್ ಕುಪ್ಪೆಪದವು ಶಾಖೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು ಅಹಿಂಸಾ ಧರ್ಮ ಪಾಲನೆಯಿಂದ ಸದ್ಗುಣರ ಸಹವಾಸದಿಂದ ತಾವೂ ಸದ್ಗುಣ ಸಂಪನ್ನರಾಗಿ ಬಾಳಬೇಕೆಂದು ನೂತನ ಘಟಕಕ್ಕೆ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರಿನ ಹಿರಿಯ ನ್ಯಾಯವಾದಿ ಸುರೇಶ್ ಬಳ್ಳಾಲ್ ಮಾತನಾಡಿ ಕಡಿಮೆ ಜನಸಂಖ್ಯೆ ಇರುವ ನಮ್ಮ ಜೈನ ಸಮುದಾಯಕ್ಕೆ ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕುತ್ತಿಲ್ಲ. ಇದಕ್ಕಾಗಿ ನಾವು ಅಹಿಂಸಾತ್ಮಕವಾಗಿ ಹೋರಾಟ ನಡೆಸಬೇಕಿದೆ.
ಸಮಾಜಮುಖಿ ಕಾರ್ಯಚಟುವಟಿಕೆಗಳ ಮೂಲಕ ನೂತನ ಶಾಖೆ ಯಶಸ್ವಿಯಗಲಿ ಎಂದು ಹಾರೈಸಿದರು. ಕು.ಅನ್ವಿತಾ ಮತ್ತು ಕು.ಅದ್ವಿತಾ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಬಂಟ್ವಾಳ ಜೈನ್ ಮಿಲನ್ನ ಅಧ್ಯಕ್ಷ ಡಾ.ಸಂದೀಪ್ ಕುಮಾರ್ ಸಿದ್ದಕಟ್ಟೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಕುಪ್ಪೆಪದವು ಶಾಖೆಯ ಸ್ಥಾಪನೆಯ ಉದ್ದೇಶ ಮತ್ತು ಶಾಖೆಗಳ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ 8ರ ಅಧ್ಯಕ್ಷ ಪುಪ್ಷರಾಜ್ ಜೈನ್ ಸಾಂಧರ್ಭಿಕವಾಗಿ ಮತನಾಡಿದರು. ಮಂಗಳೂರು ವಿಭಾಗದ ಉಪಾಧ್ಯಕ್ಷ ಸುದರ್ಶನ್ ಜೈನ್ ಕುಪ್ಪೆಪದವು ಶಾಖೆ ಪದಾಧಿಕಾರಿಗಳಿಗೆ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಮಂಗಳೂರು ವಿಭಾಗದ ನಿರ್ದೇಶಕ ಜಯರಾಜ್ ಕಂಬಳಿ ಪಡುಬಿದ್ರಿ, ಬೀಡಿನ ರತ್ನಾಕರರಾಜ್ ಅರಸು, ಕಿನ್ಯಕ್ಕ ಬಳ್ಳಾಲ್, ಕಿಲೆಂಜಾರು ಅರಮನೆಯ ದಿನೇಶ್ ಕುಮಾರ್ ಬಳ್ಳಾಲ್ ನೂತನ ಶಾಖೆಯ ಗೌರವ ಸಲಹೆಗಾರನಾದ ಪ್ರವೀಣ್ ಕುಮಾರ್ ಅಗರಿ, ಹಿರಿಯ ನ್ಯಾಯವಾದಿ ಭಾಸ್ಕರ ಎಸ್ ಕಟ್ಟೆಮಾರ್, ಅಜಿತ್ ಕುಮಾರ್ ಜೈನ್, ನೂತನ ಶಾಖೆಯ ಅಧ್ಯಕ್ಷ ಭೋಜರಾಜ ಜೈನ್, ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್, ವಿನೋದಮ್ಮ ಉಡುಪಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಅದ್ವಿತಾ ಕುಪ್ಪೆಪದವು ವಿನ್ಯಾಸಗೊಳಿಸಿದ ಶಾಖಾ ಲಾಂಛನವನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯ್ತು. ಸನ್ಮತಿ ಜಯಕೀರ್ತಿ ಸ್ವಾಗತಿಸಿದರು. ಪ್ರಜ್ವಲ್ ಜೈನ್ ಮುಡ್ಲಿ ಕಾರ್ಕಳ ಕಾರ್ಯಕ್ರಮ ನಿರ್ವಹಿಸಿದರು. ಪುನೀತ್ ಜೈನ್ ಕುಪ್ಪೆಪದವು ಸಹಕರಿಸಿದರು. ಸಭಾಕಾರ್ಯಕ್ರಮದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
