ಕೋಲಾರ : ಕೋಲಾರ ನಗರದ ಆರ್.ಜಿ. ಲೇಔಟ್ನಲ್ಲಿ ಸ್ಥಾಪಿತವಾಗಿರುವ ಸ್ನೇಹ ಸೇವಾ ಟ್ರಸ್ಟ್ (ರಿ) ವತಿಯಿಂದ ಮುಳಬಾಗಿಲು ತಾಲ್ಲೂಕು ಮುಡಿಯನೂರು ಗ್ರಾಮದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಕ್ರೀಡಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು .ಅಧ್ಯಕ್ಷರಾದ ಆರ್.ರಘುಪತಿಗೌಡ ಮಾತನಾಡಿ ಪಾಠದ ಜೊತೆಗೆ ಆಟವನ್ನೂ ಸಹ ಕಲಿತು ಒಳ್ಳೆಯ ವಿದ್ಯಾರ್ಥಿಗಳಾಗಿ ಕಾಲೇಜಿಗೆ ಹೆಸರು ತರಬೇಕೆಂದು ತಿಳಿಸಿದರು. 
ಕಾರ್ಯದರ್ಶಿ ಎಂ.ರಮೇಶ್ ಸಹ ಮಾತನಾಡಿ ವಿದ್ಯಾರ್ಥಿಗಳನ್ನು ಒಳ್ಳೆಯ ಶಿಸ್ತು ಕಲಿಸಬೇಕು. ತಂದೆ ತಾಯಿ ಹಾಗೂ ಗುರುಗಳಿಗೆ ಗೌರವ ನೀಡಬೇಕು. ಓದಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಕಾಲೇಜಿಗೆ ಗೌರವ ತರಬೇಕು. ಕ್ರೀಡೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ರೀತಿ ಅಭ್ಯಾಸ ಮಾಡಿ ಮುಂದುವರಿಯಬೇಕೆಂದು ತಿಳಿಸಿದರು. ನಾವು ಒಳ್ಳೆಯ ಕೆಲಸಕ್ಕೆ ಸೇರಿ ನೀವು ಸಹ ಇದೇ ರೀತಿ ಇತರೆ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಮಂಜುಳ ವಹಿಸಿದ್ದರು. ಕ್ರೀಡಾ ಸಾಮಗ್ರಿಗಳನ್ನು ಪಡೆದುಕೊಂಡು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ನೆರವಾಯಿತು ಎಂದು ತಿಳಿಸಿದರು.
ಪ್ರಾರ್ಥನೆ ಕಾವೇರಿ ಮತ್ತು ಸಂಗಡಿಗರಿಂದ, ನಿರೂಪಣೆ ಉಪನ್ಯಾಸಕ ಕೆಂಚಪ್ಪ, ವಂದನಾರ್ಪಣೆ ಉಪನ್ಯಾಸಕ ರಮೇಶ್ ನಡೆಸಿಕೊಟ್ಟರು. ಸಭೆಯಲ್ಲಿ ಗೌರವಾಧ್ಯಕ್ಷ ಜನಾರ್ಧನ್, ಉಪಾಧ್ಯಕ್ಷರಾದ ವಲ್ಲಭಣ್ಣ, ಸದಸ್ಯರಾದ ಸೀನಪ್ಪ, ಆನಂದ್, ಉಪನ್ಯಾಸಕರಾದ ಶ್ರೀಹರಿ, ತಾಜ್ಕೌಸರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
