ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕೊಡಮಾಡುವ ” ಚಾವಡಿ ತಮ್ಮನ ಗೌರವ”ಕ್ಕೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನೈನಾಡು ನಿವಾಸಿ, ಹಿರಿಯ ಕುಮಾರದರ್ಶನ ಪಾತ್ರಿ ಮುತ್ತಪ್ಪ ಮೂಲ್ಯ ನೈನಾಡು ಆಯ್ಕೆಯಾಗಿದ್ದಾರೆ.
ಮಂಗಳೂರು ಉರ್ವಸ್ಟೋರ್ ನಲ್ಲಿರುವ ಅಕಾಡೆಮಿಯ ತುಳುಭವನದ ಸಿರಿಚಾವಡಿಯಲ್ಲಿ ಜೂ.22ರಂದು ಅಪರಾಹ್ನ 3.30ಗಂಟೆಗೆ ಚಾವಡಿ ತಮ್ಮನ ನಡೆಯಲಿದೆ. ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸುವರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಸನ್ಮಾನಿಸುವರು. ತುಳು ಸಂಶೋಧಕ ಡಾ. ಅಶೋಕ್ ಆಳ್ವ ಅಭಿನಂದನಾ ಭಾಷಣ ಮಾಡುವರು ಎಂದು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಮತ್ತು ಕಾರ್ಯಕ್ರಮದ ಸದಸ್ಯ ಸಂಚಾಲಕ ಎ.ಗೋಪಾಲ ಅಂಚನ್ ತಿಳಿಸಿದ್ದಾರೆ.
ಮುತ್ತಪ್ಪ ಮೂಲ್ಯ ಅವರು ಸಿರಿ ಆರಾಧನಾ ಕ್ಷೇತ್ರದಲ್ಲಿ ಕುಮಾರದರ್ಶನ ಪಾತ್ರಿಯಾಗಿ ಐವತ್ತು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದವರು. ಬಾಲ್ಯದಲ್ಲೇ ತನ್ನ ಸಂಕಷ್ಟ ನಿವಾರಣೆಗಾಗಿ ದಲ್ಯ ಸೇವೆ ಸ್ವೀಕರಿಸಿದ ಇವರು ತನ್ನ ಎಂಟರ ಹರೆಯದಲ್ಲಿ ಆದಿ ಆಲಡೆ ಕವತ್ತಾರು ಕ್ಷೇತ್ರದಲ್ಲಿ ದಲ್ಯ ಸೇವೆಗೆ ನಿಂತವರು. ನಂತರ ಸುದೀರ್ಘ ಕಾಲದಿಂದ ಮನೆಗಳಲ್ಲಿ ನಡೆಯುವ ಸಿರಿ ಆರಾಧನೆ ಕಾರ್ಯಕ್ರಮಗಳಲ್ಲಿ ಕುಮಾರ ಪಾತ್ರಿಯಾಗಿ ಸೇವೆ ಸಲ್ಲಿಸಿರುವುದಲ್ಲದೆ ಕವತ್ತಾರು, ನಂದಳಿಕೆ, ಉರ್ಗಿದೊಟ್ಟು, ಸಿರಿಗುಂಡದಪಾಡಿ, ಪಾದೆಬೆಟ್ಟು ಮೊದಲಾದ ಕ್ಷೇತ್ರಗಳಲ್ಲಿ ಕಾಲಕಾಲಕ್ಕೆ ನಡೆಯುವ ಉತ್ಸವಗಳಲ್ಲಿ ಕುಮಾರದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

