ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಮೊಂತಿಮಾರುಪಡ್ಪು ಎಂಬಲ್ಲಿ ಮನೆಯೊಂದರ ಚಿಲಕ ಮುರಿದು ಒಳ ಪ್ರವೇಶಿಸಿದ ಕಳ್ಳರು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಸುಲಿದ ಅಡಿಕೆಯನ್ಬು ಕಳವು ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೊಂತಿಮಾರುಪಡ್ಪು ನಿವಾಸಿ ಮೊಯಿದ್ದೀನ್ ಎಂಬವರ ಹಳೆಯ ಮನೆಯಲ್ಲಿ ಈ ಕಳವು ನಡೆದಿದೆ. ಸುಮಾರು 76 ಸಾವಿರ ರೂ ಮೌಲ್ಯದ ಸುಮಾರು 3 ಕಿಂಟ್ವಾಲ್ ನಷ್ಟು ಸುಲಿದ ಅಡಿಕೆಯನ್ನು ಕಳವುಗೈದಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಯಿದ್ದೀನ್ ಅವರು ಅಡಿಕೆ ಲೀಸ್ ಪಡೆಯುವ ವ್ಯಾಪಾರಿಯಾಗಿದ್ದು, ಲೀಸ್ ಗೆ ಪಡೆದ ಅಡಿಕೆಯನ್ನು ಇವರ ಮನೆಯ ಹತ್ತಿರ ಇರುವ ಹಳೆಯ ಮನೆಯಂಗಳದಲ್ಲಿ ಒಣಗಿಸಿ ಅದೇ ಮನೆಯಲ್ಲಿ ದಾಸ್ತಾನು ಇಟ್ಟಿದ್ದರು.ಕಾರ್ಮಿಕರು ಅಡಕೆಯನ್ನು ಸುಲಿದು 9 ಗೋಣಿ ಚೀಲದಲ್ಲಿ ತುಂಬಿಸಿ ಹಳೇ ಮನೆಯಲ್ಲಿ ದಾಸ್ತಾನಿಟ್ಟು ಬೀಗ ಹಾಕಿ ತೆರಳಿದ್ದರು. ಬುಧವಾರ ಬೆಳಿಗ್ಗೆ ಅಡಿಕೆ ಸುಲಿಯಲು ಬಂದಿದ್ದ ಕಾರ್ಮಿಕರೊಂದಿಗೆ ಹಳೆ ಮನೆಗೆ ಬಂದಾಗ ಚಿಲಕ ಮುರಿದಿತ್ತು.ಒಳ ಹೋಗಿ ನೋಡಿದಾಗ 9 ಗೋಣಿ ಚೀಲದಲ್ಲಿ ಕೇವಲ 3 ಗೋಣಿಗಳು ಮಾತ್ರ ಉಳಿದಿದ್ದು,ಅಡಕೆ ತುಂಬಿದ 6 ಗೋಣಿಚೀಲ ಕಳವಾಗಿರುವುದು ಕಂಡು ಬಂದಿದೆ. .ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ ಮತ್ತವರ ಸಿಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ,ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ
