ಬಂಟ್ವಾಳ : ಜೀವನದಲ್ಲಿ ಕೆಲಹೊತ್ತನ್ನು ಸಮಾಜದ ಸೇವೆಗೂ ಮೀಸಲಿಡುವುದರಿಂದ ಸಂಘಟನೆಯು ಬಲಿಷ್ಠವಾಗಲು ಸಹಕಾರಿಯಾಗುವುದು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅಮ್ಮೆಂಬಳ ಆನಂದ ಹೇಳಿದರು.
ಅವರು ಬಿ.ಸಿ.ರೋಡಿನ ಪೊಸಳ್ಳಿಯಲ್ಲಿ ನಡೆದ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಡಿ. ಎಂ. ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ ಚೆಂಡ್ಲ, ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸುರೇಶ್ ಕುಲಾಲ್, ವಕೀಲ ಸುರೇಶ್ ಕುಮಾರ್ ನಾವೂರ, ಉದ್ಯಮಿ ಚಂದ್ರಹಾಸ ಪಲ್ಲಿಪಾಡಿ, ಬಂಟ್ವಾಳ ಯುವವೇದಿಕೆ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ನಮಿತಾ ಉಮೇಶ್, ದಳಪತಿ ಹರಿಪ್ರಸಾದ್ ಭಂಡಾರಿಬೆಟ್ಟು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಕೃಷ್ಣಶ್ಯಾಮ್ ಸ್ವಾಗತಿಸಿದರು. ಇದೇವೇಳೆ ಸಮಾಜ ಬಾಂಧವರಿಗೆ ನಡೆದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಹೆಸರನ್ನು ದಾಮೋದರ್ ಏರ್ಯ ಮತ್ತು ಕೇಶವ ಮಾಸ್ತರ್ ವಾಚಿಸಿದರು. ಕಾರ್ಯದರ್ಶಿ ಜಯಂತಿ ಗಂಗಾಧರ್, ಜೊತೆಕಾರ್ಯದರ್ಶಿಗಳಾದ ರಮೇಶ್ ಸಾಲ್ಯಾನ್, ಪದ್ಮನಾಭ ಅಲೆತ್ತೂರು, ಸಂಘಟನಾ ಕಾರ್ಯದರ್ಶಿ ಯಾದವ ಕುಲಾಲ್, ಸಾಂಸ್ಕೃತಿಕ ಕಾರ್ಯದರ್ಶಿ ಜಲಜಾಕ್ಷಿ ಪಾಣೆಮಂಗಳೂರು, ಪ್ರೇಮಾ ಪೊಸಳ್ಳಿ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.
ಈ ಸಂದರ್ಭದಲ್ಲಿ ಕರಾಟೆಯಲ್ಲಿ ಬ್ಯಾಕ್ ಬೆಲ್ಟ್, ಟೇಬಲ್ ಟೆನ್ನಿಸ್ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸುಜಿತ್ ಕುಲಾಲ್ರನ್ನು ಸನ್ಮಾನಿಸಲಾಯಿತು. ರಾಧಾಕೃಷ್ಣ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Attachments area

