ಬಂಟ್ವಾಳ ತಾಲೂಕು ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಭಾನುವಾರ ನಡೆದ ಶಾಲಾ ಅಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ, ಊರಿನ ಹಿರಿಯರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು 1920ರಲ್ಲಿ ಸ್ಥಾಪನೆಯಾಗಿತ್ತು. 1923ರಲ್ಲಿ ಸರಕಾರದ ಮಾನ್ಯತೆಯನ್ನು ಪಡೆದುಕೊಂಡಿರುತ್ತದೆ. 2020ರ ವೇಳೆಗೆ ಶಾಲೆ ಸ್ಥಾಪನೆಗೊಂಡು 100 ವರ್ಷ ಪೂರೈಸುತ್ತಿದೆ. ಶಾಲೆಯ ಎಲ್ಲಾ ಹಳೆ ವಿದ್ಯಾರ್ಥಿಗಳು ಹಾಗೂ ಊರಿನವರು ಸೇರಿ ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಯಿತು.
ಶತಮನೋತ್ಸವ ಆಚರಣೆಗೆ ಅರ್ಥ ಕಲ್ಪಿಸುವ ಉದ್ದೇಶದಿಂದ ಶಾಲೆಗೆ ಕಟ್ಟಡ ಸೇರಿದಂತೆ ಶಾಲೆಗೆ ಅವಶ್ಯಕತೆ ಇರುವ ಮೂಲಭೂತ ಸೌಲಭ್ಯ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ನಿಟ್ಟಿನಲ್ಲಿ ರಘು ಎಲ್. ಶೆಟ್ಟಿ ಅವದ ಗೌರವಾಧ್ಯಕ್ಷತೆಯಲ್ಲಿ ಶಾಲಾ ಕಟ್ಟಡ ನಿರ್ಮಾಣ ಸಮಿತಿಯನ್ನು ರಚಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ಶತಮಾನೋತ್ಸವದ ವೇಳೆ ನಡೆದುಬಂದ ಹೆಜ್ಜೆಗಳ ಕುರಿತು ಸ್ಮರಣ ಸಂಚಿಕೆಯನ್ನು ಹೊರತರಲು ಉದ್ದೇಶಿಸಲಾಯಿತು.
ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುಧಾಕರ ಪೂಂಜಾ, ಅಧ್ಯಕ್ಷ ಬೆಳ್ಳೂರು ಹೊಸಮನೆ ಸಚ್ಚೀಂದ್ರನಾಥ ರೈ, ಶಾಲೆಯ ಸಂಚಾಲಕ ಕೆ. ನರೇಂದ್ರನಾಥ ಭಂಡಾರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಠ, ಶಾಲೆಯ ಮುಖ್ಯೋಪಾಧ್ಯಾಯ ಕೇಶವ ನಾಯ್ಕ, ಕಟ್ಟಡ ಸಮಿತಿಗೆ ನೂತನವಾಗಿ ಅಧ್ಯಕ್ಷರಾದ ರಮೇಶ್ಚಂದ್ರ ಭಂಡಾರಿ, ಉಪಾಧ್ಯಕ್ಷ ದಯಾನಂದ ಮೂಡುಬೆಟ್ಟು, ಕಾರ್ಯದರ್ಶಿ ಬಾಲಕೃಷ್ಣ ಕುಲಾಲ್, ಕೋಶಾಧಿಕಾರಿ ಕೋಚಣ್ಣ ರೈ, ಸಂಘಟನಾ ಕಾರ್ಯದರ್ಶಿ ಸೂರ್ಯಕಾಂತ ಶೆಟ್ಟಿ ಪಲ್ಲಿಪಾಡಿ, ನಡ್ಯೋಡಿಗುತ್ತು ತಿಮ್ಮಪ್ಪ ರೈ, ಕಿಶೋರ್ ಭಂಡಾರಿ, ಬಾಲಕೃಷ್ಣ ಶೆಟ್ಟಿ ಗುಂಡಾಲಗುತ್ತು, ನಿವೃತ್ತ ಶಿಕ್ಷಕಿಯರಾದ ಕಮಲಾಕ್ಷಿ, ಮೋಹಿನಿ ಉಪಸ್ಥಿತರಿದ್ದರು.ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಿಶ್ವಂಭರ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
