ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಸುಜೀರ್ ನೇತ್ರಾವತಿ ನದಿ ತೀರದಲ್ಲಿ ಬೃಹತ್ತಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕಾ ಅಡ್ಡೆಗೆ ಬಂಟ್ವಾಳ ಉಪವಿಭಾಗದ ಎಎಸ್ಪಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಕೋಟ್ಯಾಂತರ ರೂ ಮೌಲ್ಯದ ಸೊತ್ತುಗಳ ವಶಪಡಿಸಿಕೊಂಡಿದ್ದಾರೆ. ಹಿಟಾಚಿಯಿಂದ ಡ್ರೆಜ್ಜಿಂಗ್ ಮೂಲಕ ನೇತ್ರಾವತಿ ನದಿಯ ಹಿನ್ನೀರಿನಿಂದ ಮರಳು ತೆಗೆದು ಅದನ್ನು ಫಿಲ್ಟರ್ ಮಾಡಿ ಬಳಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ದೊರೆತ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಈ ದಾಳಿ ಕಾರ್ಯಾಚರಣೆ ನಡೆಸಿದ ಎ.ಎಸ್.ಪಿ.ಸೈದುಲ್ ಅಡಾವತ್ ನೇತೃತ್ವದ ಪೊಲೀಸ್ ತಂಡ ಕೋಟ್ಯಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗೆ ಹಸ್ತಾಂತರ ಮಾಡಿದ್ದಾರೆ.

ದಾಳಿಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮೂರು ಟಿಪ್ಪರ್ ಲಾರಿಗಳು, ಎರಡು ಹಿಟಾಚಿ , ಒಂದು ಗ ಜನರೇಟರ್ ,ಮರಳು ಫಿಲ್ಟರ್ ಮಾಡುವ ಯುನಿಟ್ , ಸುಮಾರು 35 ಲೋಡ್ ನಷ್ಟು ಶೇಖರಿಸಿಡಲಾದ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 1. 65 ಕೋ.ರೂ. ಆಗಿದೆ ಎಂದು ಅಂದಾಜಿಸಲಾಗಿದೆ. ದಾಳಿಯ ವೇಳೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕರಾದ ಶರಣೇಗೌಡ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ. ಎಂ.ಎಸ್, ಸಿಬ್ಬಂದಿಗಳಾದ ಹನುಮಂತ, ಉಮೇಶ, ಕುಮಾರ್, ನಝೀರ್, ನಾಗನಾಥ್, ಅಜಿತ್ ಬಂಗೇರಾ, ಕಿರಣ್ ಪಾಲ್ಗೊಂಡಿದ್ದರು.ಪ್ರಕರಣದ ಮುಂದಿನ ತನಿಖೆ ಗಣಿ ಮತ್ತು ಭೂವಿಜ್ಙಾನ ಇಲಾಖೆ ನಡೆಸುತ್ತಿದೆ.ಸುಜೀರ್,ಪುದು ಮೊದಲಾದೆಡೆ ಕಳೆದ ಹಲವು ಸಮಯಗಳಿಂದ ಡ್ರಜ್ಜಿಂಗ್ ಮೂಲಕ ಅಕ್ರಮ ಮರಳುಗಾರಿಕೆಯ ದಂಧೆ ನಡೆಯುತ್ತಿದ್ದು,ಅಗೊಮ್ಮೆ,ಈಗೊಮ್ಮೆ ದಾಳಿಯ ನಾಟಕ ನಡೆಯುತ್ತಿದೆ.ಮತ್ತೆ ಯಥಾ ಸ್ಥಿತಿಯಲ್ಲಿ ಅಕ್ರಮ ಮರಳುಗಾರಿಕೆ ಮುಂದುವರಿಯುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


