ಪೊಳಲಿ :ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಉಡುಪಿ ಸೋದೆ ಮಠದ ಶ್ರೀ ವಿದ್ಯಾವಲ್ಲಭ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು ಸ್ವಾಮೀಜಿಯವರು ಸೋದೆ ಮಠದ ಅದೀನದಲ್ಲಿರುವ ಮಳಲಿ ನಾರಳ ಮಠಕ್ಕೆ ಭೇಟಿ ನೀಡಿದ ಸ್ವಾಮೀಜಿಯವರು ಶ್ರೀ ಕ್ಷೇತ್ರ ಪೊಳಲಿಯ ದರ್ಶನ ಮಾಡಿದರು.
ಇತ್ತೀಚೆಗೆ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಜರುಗಿದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸಹಕರಿಸಿದ ತಂತ್ರಿ ವರ್ಗದ ಸುಬ್ರಹ್ಮಣ್ಯ ತಂತ್ರಿ, ಕೃಷ್ಣ ತಂತ್ರಿ, ವೆಂಕಟೇಶ ತಂತ್ರಿ ,ಪವಿತ್ರಪಾಣಿ ಮಾಧವ ಭಟ್,ನಾರಾಯಣ ಭಟ್, ಪರಮೇಶ್ವರ ಭಟ್, ರಾಮ ಭಟ್ ಹಾಗೂ ಬ್ರಹ್ಮಕಲಶೋತ್ಸವದ ಎಲ್ಲ ದಿನ ಅಡುಗೆಯಲ್ಲಿ ಸಹಕರಿಸಿದ ಚಂದ್ರ ಶೇಖರ ರಾವ್ ,ಗಂದಾಡಿ ಕೃಷ್ಣಾನಂದ, ಪ್ರಮೋದ್ ರಾವ್ ಹಾಗೂ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡ ಹಲವರನ್ನು ಬ್ರಾಹ್ಮಣ ಮಹಾಸಭಾದ ವತಿಯಿಂದ ಸೋದೆ ಸ್ವಾಮಿಗಳು ಅಭಿನಂದಿಸಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸೋದೆ ಸ್ವಾಮೀಜಿ, “ಯಾವುದೇ ಒಂದು ದೇವಸ್ಥಾನ ಬೆಳಗಬೇಕಿದ್ದರೆ ಅಲ್ಲಿ ಮುಖ್ಯವಾಗಿ ಆಚಾರ್ಯ ತಪಸ್ಸು(ತಂತ್ರಿಗಳ ತಪಸ್ಸು), ವೇದ ಪರಾಯಣ, ನಿಯಮಗಳ ಅನುಸರಣೆ, ಉತ್ಸವ ಮತ್ತು ಅನ್ನದಾನದಂತಹ ಪ್ರಮುಖ ಐದು ಲಕ್ಷಣಗಳಿರಬೇಕು. ಹೀಗಿದ್ದರೆ ಖಂಡಿತವಾಗಿಯೂ ದೇಗುಲ ಬೆಳಗುತ್ತದೆ ಎಂದರು.

ತಂತ್ರಗಳು ದೇವರ ಪ್ರತಿನಿಧಿ. ನಿಯಮಗಳಲ್ಲಿ ಬದಲಾವಣೆಯಾಗಬೇಕಿದ್ದರೆ ತಂತ್ರಿಗಳ ನೆರವು ಪಡೆಯಬೇಕು. ಆದ್ದರಿಂದಲೇ ಕರಾವಳಿ ಭಾಗದ ದೇವಾಲಯಗಳಲ್ಲಿ ಇಂದಿಗೂ ತಂತ್ರಿಗಳಿಗೆ ಮಹತ್ವವಿದೆ. ಅರ್ಚಕರು ಭಕ್ತರಿಗೆ ಸ್ಪಂದನೆ ಕೊಡುವವರಾಗಿದ್ದಾರೆ. ನಾರಳ ಮಠಕ್ಕೂ ಪೊಳಲಿಗೂ ಒಂದು ಅವಿನಾಭಾವ ಸಂಬಂಧವಿರುವುದರಿಂದ ನಾನು ಇಲ್ಲಿಗೆ ಬರುವಂತಾಯಿತು. ಶ್ರೀ ದೇವಿಯ ಅನುಗ್ರಹ ಎಲ್ಲರಿಗೂ ಲಭಿಸಲಿಎಂದವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕಿರು ಸಭಾ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಭಾದ ಗೌರವಾಧ್ಯಕ್ಷ ಎಂ ಹರಿರಾವ್ ಕೈಕಂಬ, ಅಧ್ಯಕ್ಷ ರಾಮಚಂದ್ರ ಶಬರಾಯ, ಕಾರ್ಯದರ್ಶಿ ಭಾಸ್ಕರ್ ರಾವ್ ನರಿಕಲ, ಉಪಾಧ್ಯಕ್ಷ ಶ್ರೀಪತಿ ನಾರಳ, ಕೋಶಾಧಿಕಾರಿ ಚಾರ್ಟರ್ಡ್ ಅಕೌಂಟೆಂಟ್ ಗಣೇಶ್ ರಾವ್,ಶ್ರೀ ಕ್ಷೇತ್ರ ಪೊಳಲಿ ವತಿಯಿಂದ ದೇವಾಲಯದ ಮೊಕ್ತೇಸರ ಚೇರಾ ಸೂರ್ಯನಾರಾಯಣ ರಾವ್ ,ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಇತರರು ಸೋದೆ ಮಠಾಧೀಶರನ್ನು ಫಲಪುಷ್ಪ ನೀಡಿ ಗೌರವಿಸಿದರು. ಇದಕ್ಕಿಂತ ಮುಂಚೆ ಸೋದೆಯವರು ಪೊಳಲಿ ಹಾಗೂ ನಾರಳ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ನಾರಳ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ನಾರಳ ಸೋದೆ ಮಠದ ದಿವಾಣ್ ಪಾಡಿಗಾರ ಶ್ರೀನಿವಾಸ ತಂತ್ರಿ ಉಪಸ್ಥಿತರಿದ್ದು, ಸ್ವಾಮೀಜಿಯವರನ್ನು ಆದರದಿಂದ ಬರಮಾಡಿಕೊಂಡು ಅಭಿನಂದಿಸಿದರು. ರಮೇಶ್ ಆಚಾರ್ಯ ಅಭಿನಂದನಾ ಭಾಷಣ ಮಾಡಿದರು. ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಕಾರ್ಯಕ್ರಮ ನಿರೂಪಿಸಿದರು.









