ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮ ಕಾಪು ಗುಡ್ಡ ಪ್ರದೇಶದಲ್ಲಿ ಕಳೆದ ವರ್ಷ ಪತ್ತೆಯಾಗಿರುವ ಪುರಾತನ ಶಿವ ಸಾನಿಧ್ಯದಲ್ಲಿ ಸ್ಥಳೀಯ ಭಕ್ತರು ಭಾನುವಾರ ದಿನವಿಡೀ ಭಜನೆ ಸೇವೆ ಸಲ್ಲಿಸಿದರು.ಈ ಎತ್ತರದ ಗುಡ್ಡ ಪ್ರದೇಶದಲ್ಲಿ ಪಾಳು ಬಿದ್ದಿರುವ ಬಾವಿ ಸಹಿತ ಶಿವಲಿಂಗ, ಪಾಣಿಪೀಠ ಮತ್ತಿತರ ಹಳೆಯ ಶಿಲಾಕೃತಿ ಅಲ್ಲಲ್ಲಿ ಹರಡಿಕೊಂಡಿದೆ.
ಈ ಹಿಂದೆ ರಾಜರ ಆಡಳಿತಾವಧಿಯಲ್ಲಿ ನಡೆದ ಸಾಮ್ರಾಜ್ಯ ವಿಸ್ತರಣೆ ಸಂದರ್ಭ ದೇವಾಲಯ ಧ್ವಂಸಗೊಂಡಿರುವ ಸಾಧ್ಯತೆಯಿದೆ ಎಂಬ ಅಭಿಪ್ರಾಯ ಇಲ್ಲಿನ ಭಕ್ತರಿಂದ ವ್ಯಕ್ತವಾಗಿದೆ. ಈ ಶಿವಾಲಯ ಮತ್ತೆ ಪುನರ್ ನಿರ್ಮಾಣಗೊಂಡು ಪೂಜೆ ಪುರಸ್ಕಾರ ನಡೆಯುವಂತಾಗಲಿ ಎಂದು ಭಕ್ತರು ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಎಂಟಕ್ಕೂ ಮಿಕ್ಕಿ ವಿವಿಧ ಭಜನಾ ತಂಡಗಳು ಭಾಗವಹಿಸಿದ್ದು, ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡರು.

