ಪೊಳಲಿ: ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡಿರುವ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನವು ಶಿಲ್ಪಕಲೆಗಳಿಂದ ಕಂಗೊಳಿಸುತ್ತಿದ್ದು, ಸುಂದರವಾರದ ಕೆತ್ತನೆಗಳಿಂದ ಮನಸೂರೆಗೊಳ್ಳುವಂತೆ ಮಾಡುತ್ತಿದೆ. ಕಾಷ್ಠಶಿಲ್ಪಿಗಳಾದ ಗಣೇಶ್ ಆಚಾರ್ಯ ಹಾಗು ಲಕ್ಷ್ಮಣ ಶರ್ಮ ನೇತೃತ್ವದಲ್ಲಿ ಈ ಸುಂದರ ಕೆತ್ತನೆಗಳನ್ನು ಕೆತ್ತಲಾಗಿದ್ದು, ಶ್ರೀದುರ್ಗಾಪರಮೇಶ್ವರಿ, ಶ್ರೀರಾಜರಾಜೇಶ್ವರಿ, ಶ್ರೀಮಹಾಗಣಪತಿ, ಶ್ರೀಸುಬ್ರಹ್ಮಣ್ಯ, ಶ್ರೀ ಭದ್ರಕಾಳಿ ದೇವರುಗಳ ಹಾಗೂ ಪರಿವಾರ ಸಾನಿಧ್ಯಗಳ ಗರ್ಭಗೃಹ ಪುರ್ನನಿರ್ಮಾಣವು ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಪೂರೈಸಲಾಗಿದೆ.
ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣ ಸಂಪೂರ್ಣವಾಗಿ ಮರ ಹಾಗೂ ಕಲ್ಲಿನ ಕೆತ್ತನೆಗಳ ಮೂಲಕ ನಿರ್ಮಿಸಲಾಗಿದೆ. ಮರಗಳ ಮೇಲೆ ಕಂಚಿನ ಹೊದಿಕೆ ಹಾಕಲಾಗಿದೆ. ಗರ್ಭಗುಡಿಯ ದಾರಂದ ಬಾಗಿಲುಗಳಿಗೆ ಆಯಾಯ ಸಮುದಾಯದವರು ಸಮರ್ಪಿಸಿದ ರಜತ ಹೊದಿಕೆಗಳನ್ನು ಮುಚ್ಚುವ ಕೆಲಸ ಭರದಿಂದ ಸಾಗುತ್ತಿದೆ. ದೇವಸ್ಥಾನ ಬಹುತೇಕ ಪೂರ್ಣಗೊಂಡಿದ್ದು, ಆಯಾಯ ಶಿಲ್ಪಿಗಳ ತಂಡ ಅಂತಿಮ ಸ್ಪರ್ಷದಲ್ಲಿ ನಿರತರಾಗಿದ್ದಾರೆ. ದೇವರ ಮೂಲಗರ್ಭಗುಡಿಯನ್ನು ಹಾಗೆಯೇ ಉಳಿಸಲಾಗಿದ್ದು, ಅದರ ಸುತ್ತಲಿನ ಪ್ರಾಂಗಣವನ್ನು ಸಂಪೂರ್ಣವಾಗಿ ಶಿಲಾಮಯವಾಗಿ ನಿರ್ಮಿಸಲಾಗಿದೆ. ಮರದ ಕುಸುರಿ ಕೆಲಸಗಳು ಮನಮೋಹಕವಾಗಿದ್ದು, ಭಕ್ತರನ್ನು ಕೈಬೀಸಿ ಕರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕಾಷ್ಠಶಿಲ್ಪಿಗಳಾದ ಗಣೇಶ್ ಆಚಾರ್ಯ ಅವರ ನೇತೃತ್ವದಲ್ಲಿ ದೇವಸ್ಥಾನದ ಗರ್ಭಗುಡಿಯ ಹೊರ ಆವರಣದಲ್ಲಿ ಸುರಥ ರಾಜನ ಕಥೆಯನ್ನು ಮರದಿಂದಲೇ ಕೆತ್ತಲಾಗಿದೆ. ಪೊಳಲಿ ದೇವಸ್ಥಾನದ ಒಂದು ತಿಂಗಳ ಅವಧಿಯ ಜಾತ್ರೆಯ ಧ್ವಜಾರೋಹಣದಿಂದ ಧ್ವಜಾವರೋಹಣದವರೆಗಿನ ಕೆತ್ತನೆಯನ್ನೂ ಮಾಡಲಾಗಿದೆ. ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಈ ಎಲ್ಲ ಕೆತ್ತನೆಗಳನ್ನು ನೋಡಿ ದೇವಸ್ಥಾನದ ಹಿಂದಿನ ಪುರಾಣ ಕಥೆಯನ್ನು ಸುಲಭವಾಗಿ ಅರ್ಥೈಸಬಹುದು.
ಕಳೆದ ಎರಡೂವರೆ ವರ್ಷಗಳಿಂದ ಪೊಳಲಿಯ ಕೆತ್ತನೆಯಲ್ಲಿ ನಿರತನಾಗಿದ್ದೇನೆ. ನಮ್ಮದೇ ಊರಿನ ದೇವಸ್ಥಾನದ ಸೇವೆಗೈಯ್ಯಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ದೇವಸ್ಥಾನದ ಪುರಾಣ ಕಥೆ ಎಲ್ಲರಿಗೂ ತಿಳಿಯಬೇಕೆಂಬ ನಿಟ್ಟಿನಲ್ಲಿ ಗರ್ಭಗುಡಿಯ ಆವರಣದಲ್ಲಿ ಮರದ ಕೆತ್ತನೆಯ ಮೂಲಕ ವಿವರಿಸಲಾಗಿದೆ. ನಮ್ಮ ತಂಡದಲ್ಲಿ ಒಟ್ಟು 10 ಮಂದಿ ಇದ್ದು, ಸಂತೋಷದಿಂದ ಕೆಲಸ ನಿರ್ವಹಿಸುತ್ತಿದ್ದೇವೆ.




