ಉಡುಪಿ: ಅಂಬಲಪಾಡಿ ಕಪ್ಪೆಟ್ಟುವಿನ ಖಾಸಗಿ ಸ್ಥಳದಲ್ಲಿ ಗಂಡು ನವಿಲಿನ ಕಳೇಬರ ಮಂಗಳವಾರ ಮುಂಜಾನೆ ಕಂಡು ಬಂದಿದೆ. ಸ್ಥಳಿಯ ನಿವಾಸಿ ಸುಕೇಶ್ ಅವರು ನೀಡಿದ ಮಾಹಿತಿ ತಿಳಿದು, ಉಡುಪಿಯ ಸಾಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ನವಿಲಿನ ಕಳೇಬರವನ್ನು ಆದಿಉಡುಪಿಯಲ್ಲಿರುವ ಅರಣ್ಯ ಇಲಾಖೆಯಲ್ಲಿಗೆ ಕೊಂಡೈಯ್ದು, ಅರಣ್ಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಕಾನೂನು ಪ್ರಕ್ರಿಯೆ ನಡೆದು ನವಿಲಿನ ಅಂತ್ಯಸಂಸ್ಕಾರ ಗೌರವಪೂರ್ಣವಾಗಿ ನಡೆಸುವವರೆಗೆ ಸಮಾಜಸೇವಕರು ಅರಣ್ಯ ಇಲಾಖೆಗೆ ಸಹಕಾರವನ್ನು ನೀಡಿದ್ದಾರೆ.
ಆದಿ ಉಡುಪಿಯಲ್ಲಿರುವ ಅರಣ್ಯ ಇಲಾಖೆ ಕಛೇರಿಗೆ ಆಗಮಿಸಿ, ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯರಾದ ಡಾ. ಸಂದೀಪ್ ಶೆಟ್ಟಿ ಅವರು, ಮೃತ ಗಂಡು ನವಿಲಿಗೆ ಸುಮಾರು ಮೂರು ವರ್ಷ ಪ್ರಾಯವಾಗಿದೆ. ನವಿಲಿನ ಯಕೃತ್ತು ಘಾಸಿಗೊಂಡಿರುವುದು ಕಂಡು ಬಂದಿದೆ. ಆಹಾರ ವಿಷತ್ವದ(Toxicity) ಸಮಸ್ಯೆಯಿಂದ ಬಳಲುತ್ತಿದ್ದ ನವಿಲು, ಕೆಲವು ದಿನಗಳಿಂದ ನೀರು ಆಹಾರ ಸೇವಿಸದೆ, ತೀವ್ರವಾಗಿ ಅಸ್ವಸ್ಥಗೊಂಡು ಸಾವು ಕಂಡಿದೆ ಎಂದು ಹೇಳಿದ್ದಾರೆ.
ವೈದ್ಯಕೀಯ ಪರೀಕ್ಷೆಗಳು ನಡೆದ ಬಳಿಕ, ಕಾನೂನಿನಂತೆ ರಾಷ್ಟ್ರಪಕ್ಷಿಗೆ ಅಂತಿಮ ಗೌರವ ಸಲ್ಲಿಸಿ, ಅರಣ್ಯ ಇಲಾಖೆಯ ವಠಾರದಲ್ಲಿರುವ, ಪ್ರಾಣಿಪಕ್ಷಿಗಳ ಕಳೇಬರ ದಹನಭೂಮಿಯಲ್ಲಿ ಸಮಾಜಸೇವಕರು, ಹಾಗೂ ಅರಣ್ಯ ವಿಕ್ಷಕ ದೇವರಾಜ್ ಪಾಣ ಅವರು ಅಂತ್ಯಸಂಸ್ಕಾರ ನಡೆಸಿದರು.
