ಮೂಡುಬಿದಿರೆ: ಇಲ್ಲಿನ ಎಂ.ಸಿ.ಎಸ್.ಬ್ಯಾಂಕಿನ ವತಿಯಿಂದ ಸಹಕಾರಿ ಸಪ್ತಾಹದ ಅಂಗವಾಗಿ ಚಿಂತನ ಸರಣಿ, ಸಪ್ತಸ್ವರ ಸಾಂಸ್ಕøತಿಕ ವೈಭವ ನ.14ರಿಂದ 20ರವರೆಗೆ ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆಯಲಿದೆ.
ನ.14ರ ಸಾಯಂಕಾಲ 5.30ಕ್ಕೆ ಮಾಜಿ ಸಚಿವ, ಬ್ಯಾಂಕಿನ ಅಧ್ಯಕ್ಷ ಅಮರನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಸಹಕಾರಿ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ದ.ಕ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಅವರು ಕಲ್ಪವೃಕ್ಷ ಆರೋಗ್ಯ ಕಾರ್ಡ್ ಬಿಡುಗಡೆ ಮಾಡಲಿದ್ದಾರೆ. ಶಾಸಕ ಉಮಾನಾಥ ಎ.ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಎ.ಜೆ. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಅವರಿಗೆ 2018ರ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ ನಡೆಯಲಿದೆ. ಆಳ್ವಾಸ್ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಬಳಿಕ ಸ್ಥಳೀಯ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಂದ ನೃತ್ಯ ಸಂಧ್ಯಾ ಸೌರಭ, ಝೀ ಟಿವಿ ಖ್ಯಾತಿಯ ನಿಹಾಲ್ ತಾವ್ರೋ ಅವರಿಂದ ರಸಮಂಜರಿ ನಡೆಯಲಿದೆ.
ನ.15ರಂದು ಸಾಯಂಕಾಲ 6ಗಂಟೆಯಿಂದ `ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಹಕಾರ’ ಉಪನ್ಯಾಸ, ನ.16ರಂದು ಸಂಜೆ 6ರಿಂದ `ಕೃಷಿ ಸಂಭ್ರಮ’ ನ.17 ರಂದು `ಸಾಮಾಜಿಕ ಸಾಮರಸ್ಯ ಮತ್ತು ಯುವಜನತೆ’ ಉಪನ್ಯಾಸ ಕಾರ್ಯಕ್ರಮ, ನ.18ರಂದು `ಮಹಿಳೆ ಅಬಲೆಯಲ್ಲ ಸಬಲೆ’ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ. ನ.19ರಂದು ಮತೀಯ ಸೌಹಾರ್ದತೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ನ.20ರಂದು `ನಾವಿಲ್ಲಿ ಸೈನಿಕರಲ್ಲಿ ಭಾರತದ ಗಡಿಯಲ್ಲಿ’ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಉಪನ್ಯಾಸ ಕಾರ್ಯಕ್ರಮದ ಬಳಿಕ ಪ್ರತಿದಿನ ವಿವಿಧ ಕಲಾತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಸಹಕಾರಿ ಸಪ್ತಾಹದಲ್ಲಿ ಸಹಕಾರಿ ತರಬೇತಿ ಕಾಲೇಜಿನ ರ್ಯಾಂಕ್ ವಿಜೇತರಿಗೆ, ಸ್ಥಳೀಯ ವಿದ್ಯಾ ಸಂಸ್ಥೆಗಳ ಕನ್ನಡ, ಹಿಂದಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ, ಅಂಗವಿಕಲ ವಿದ್ಯಾರ್ಥಿಗಳಿಗೆ, ಬ್ಯಾಂಕಿನ ಹಿರಿಯ ಸಕ್ರಿಯ ಸದಸ್ಯರಿಗೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 39 ಗಣ್ಯರಿಗೆ ಸಮ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ತಿಳಿಸಿದ್ದಾರೆ.

